ನವದೆಹಲಿ: ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.
ಹೊಸ ಪ್ರವಾಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿರುವ ಸರ್ಕಾರ, ಮಾರ್ಚ್ 13ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಿದೆ.
- ಸಾಗರೋತ್ತರ ಭಾರತೀಯರ ವೀಸಾ ಮುಕ್ತ ಪ್ರವಾಸ ಸವಲತ್ತನ್ನು ಏ.15ರವರೆಗೆ ತಡೆಹಿಡಯಲಾಗಿದೆ.
- ಭಾರತಕ್ಕೆ ಅನಿವಾರ್ಯಭೇಟಿ ನೀಡಬೇಕು ಎನ್ನುವ ವಿದೇಶೀಯರು ಸಮೀಪದ ಭಾರತೀಯ ದೂತವಾಸ ಸಂಪರ್ಕಿಸಬೇಕು.
- ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್, ಸ್ಪೇನ್ ಹಾಗೂ ಜರ್ಮನಿಯಿಂದ ಬರುವ ಎಲ್ಲಾ ಪ್ರವಾಸಿಗರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಇರಿಸಿ 14 ದಿನ ತಪಾಸಣೆಗೆ ಒಳಪಡಿಸಲಾಗುವುದು.
- ಭಾರತೀಯರು ಹಾಗೂ ವಿದೇಶಿಯರು ಅಗತ್ಯವಿಲ್ಲದೇ ಹೋದರೆ ಭಾರತಕ್ಕೆ ಪ್ರವಾಸ ರದ್ದುಗೊಳಿಸಬೇಕು.