ದೇಶ

ಇರಾನ್ ನಿಂದ ಇಂದು 120 ಭಾರತೀಯರು ರಾಜಸ್ತಾನಕ್ಕೆ ಆಗಮನ: ಸೇನಾ ಕೇಂದ್ರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ 

Sumana Upadhyaya

ಜೈಪುರ: ಕೊರೊನಾ ಪೀಡಿತ ಇರಾನ್ ದೇಶದಿಂದ ಸ್ಥಳಾಂತರಗೊಂಡಿದ್ದ ಸುಮಾರು 120 ಭಾರತೀಯರು ಶುಕ್ರವಾರ ರಾಜಸ್ತಾನದ ಜೈಸಲ್ಮರ್ ಗೆ ಆಗಮಿಸಲಿದ್ದು ಅವರನ್ನು ಸೇನಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.


ದಕ್ಷಿಣ ಕಮಾಂಡರ್ ಅವರ ರಕ್ಷಣೆಯಲ್ಲಿ ಭಾರತೀಯ ಸೇನೆ ಕೇಂದ್ರಗಳಲ್ಲಿ ಇರಾನ್ ನಿಂದ ಬಂದ ಭಾರತೀಯರನ್ನು ಕೆಲ ದಿನಗಳ ಕಾಲ ಇರಿಸಲಾಗುತ್ತದೆ. ವಿಮಾನ ನಿಲ್ದಾಣದಿಂದ ಈ ನಾಗರಿಕರನ್ನು ಕೊರೊನಾ ವೈರಸ್ ಅವರಿಗೆ ತಗುಲಿದೆಯೇ ಎಂದು ಪತ್ತೆಹಚ್ಚಲು ಆರಂಭಿಕ ತಪಾಸಣೆಗೆ ಈ ಸೇನಾ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ತಿಳಿಸಿದ್ದಾರೆ.


ಮತ್ತೆ ಸುಮಾರು 250 ಭಾರತೀಯರನ್ನು ಇರಾನ್ ನಿಂದ ಇದೇ 15ಕ್ಕೆ ಕರೆತರಲಾಗುವುದು. ಅವರನ್ನು ಸಹ ಜೈಸಲ್ಮರ್ ನ ಸೇನಾ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಹೇಳಿದರು.


ರಕ್ಷಣಾ ಇಲಾಖೆ ಇಂತಹ ಇನ್ನೂ 7 ಸೇನಾ ಕೇಂದ್ರಗಳನ್ನು ಕೊರೊನಾ ವೈರಸ್ ರೋಗಿಗಳಿಗೆ ಸ್ಥಾಪಿಸಿದ್ದು ಅವುಗಳಲ್ಲಿ ವಿದೇಶಗಳಿಂದ ಬರುವ ಭಾರತೀಯರನ್ನು ಇರಿಸಲಾಗುತ್ತದೆ. ಜೈಸಲ್ಮರ್, ಸೂರತ್ ಗದ್, ಜಾನ್ಸಿ, ಜೋಧ್ ಪುರ್, ದಿಯೊಲಾಲಿ, ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಈ ಸೇನಾ ಕೇಂದ್ರಗಳಿವೆ.


ಮುಂದಿನ ದಿನಗಳಲ್ಲಿ ವಿದೇಶಗಳಿಂದ ಇನ್ನಷ್ಟು ಭಾರತೀಯರನ್ನು ಕರೆತರುವ ನಿರೀಕ್ಷೆಯಿದೆ. ಅವರಿಗೆ ಇಲ್ಲಿಗೆ ಬಂದಾಗ ತಕ್ಷಣಕ್ಕೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ರಕ್ಷಣಾ ಇಲಾಖೆ ನೋಡಿಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT