ದೇಶ

ಭಾವನಾತ್ಮಕ ಪುನರ್ಮಿಲನ: ಶ್ರೀನಗರ ಜೈಲಿನಲ್ಲಿ ಪುತ್ರ ಓಮರ್ ಭೇಟಿ ಮಾಡಿದ ಫಾರೂಖ್ ಅಬ್ದುಲ್ಲಾ

Lingaraj Badiger

ಶ್ರೀನಗರ: ನಿನ್ನೆಯಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಎನ್ ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಶನಿವಾರ ಶ್ರೀನಗರದ ಉಪ ಕಾರಾಗೃಹದಲ್ಲಿರುವ ತಮ್ಮ ಪುತ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದರು. ಸುಮಾರು ಏಳು ತಿಂಗಳ ನಂತರ ಅಪ್ಪ - ಮಗನ ಭಾವನಾತ್ಮಕ ಪನರ್ಮಿಲನ ಇದಾಗಿತ್ತು.

ಶುಕ್ರವಾರ ಗೃಹ ಬಂಧನದಿಂದ ಬಿಡುಗಡೆಯಾಗಿದ್ದ ಫಾರೂಖ್ ಅಬ್ದುಲ್ಲಾ ಅವರು ಇಂದು ತಮ್ಮ ನಿವಾಸದಿಂದ ಸಮೀಪದಲ್ಲೇ ಇರುವ ಹರಿ ನಿವಾಸದಲ್ಲಿ ಗೃಹ ಬಂಧನದಲ್ಲಿರುವ ತಮ್ಮ ಪುತ್ರನನ್ನು ಭೇಟಿ ಮಾಡಿದರು.
 
82 ವರ್ಷದ ಫಾರೂಖ್ ಅಬ್ದುಲ್ಲಾ ಅವರು ಪುತ್ರ ಓಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಮನವಿ ಮಾಡಿದ್ದರು. ಹೀಗಾಗಿ ಅನುಮತಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಾರೂಖ್ ಅಬ್ದುಲ್ಲಾ ಅವರು ಪುತ್ರನೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದರು.

ಕೇಂದ್ರ ಸರ್ಕಾರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಎನ್ ಸಿ ನಾಯಕರನ್ನು ಬಂಧಿಸಿ, ಗೃಹಬಂಧನದಲ್ಲಿಡಲಾಗಿತ್ತು. ಸದ್ಯ ಫಾರೂಖ್ ಅಬ್ದುಲ್ಲಾ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು, ಪುತ್ರ ಓಮರ್ ಅಬ್ದುಲ್ಲಾ ಅವರಿಗೆ ಇನ್ನು ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

SCROLL FOR NEXT