ದೇಶ

ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳಕ್ಕೆ ಲೋಕಸಭೆಯಲ್ಲಿ ಭಾರಿ ಕೋಲಾಹಲ; ರಾಜ್ಯಸಭೆಯಲ್ಲಿ ಕೋವಿಡ್-19ರ ಚರ್ಚೆ

Srinivas Rao BV

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಬಲವಾಗಿ ಖಂಡಿಸಿದ್ದರಿಂದ ಲೋಕಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು. 

ಲೋಕಸಭೆಯಲ್ಲಿ ಈ ಕುರಿತ ಅಧಿಸೂಚನೆಯನ್ನು ಓದಲು ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಆರಂಭ ಮಾಡುತ್ತಿದ್ದಂತೆಯೇ ವಿಪಕ್ಷಗಳು ಸರ್ಕಾರದ ನಡೆಯನ್ನು ಖಂಡಿಸಿ ಹೆಚ್ಚಳ ಕ್ರಮವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಪಡಿಸಿದ್ದರಿಂದ ಸದನದಲ್ಲಿ ಭಾರಿ ಕೋಲಾಹಲ ಉಂಟಾಯಿತು. ಪ್ರತಿಪಕ್ಷಗಳ ಸದಸ್ಯರು ಆಧಿಸೂಚನೆಯ ಕಾಗದವನ್ನು ಹರಿದು ಸದನದಲ್ಲಿ ಎಸೆದರು.

ಹೆಚ್ಚುವರಿ ಸಂಪನ್ಮೂಲ ಗಳಿಸಲು ಸರ್ಕಾರ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ 3 ರೂ.ಗೆ ಏರಿಸಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು . ಅಂತಾರಾಷ್ಟ್ರೀಯ ತೈಲ ಬೆಲೆಗಳ ಕುಸಿತದಿಂದ ಉಂಟಾಗುವ ಲಾಭವನ್ನು ಗ್ರಾಹಕನಿಗೆ ತಲುಪಿಸುವ ಬದಲಿಗೆ ಸರ್ಕಾರ ಜನರ ಮೇಲೆ ಹೊರೆ ಹಾಕುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ದೂರಿದರು.

ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು ನೀಡಿದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್‌ನ ವಿಶೇಷ ಅಬಕಾರಿ ಸುಂಕವನ್ನು ಪೆಟ್ರೋಲ್‌ನ ಸಂದರ್ಭದಲ್ಲಿ ಪ್ರತಿ ಲೀಟರ್‌ಗೆ 2 ರಿಂದ 8 ರೂ.ಗೆ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು 2 ರಿಂದ 4ರೂಪಾಯಿಗೆ ಏರಿಸಲಾಗಿದೆ. ಹೆಚ್ಚುವರಿಯಾಗಿ ರಸ್ತೆ ಸೆಸ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಪ್ರತಿ ಲೀಟರ್‌ಗೆ 1 ರೂ.ಸೇರಿಸಿದ್ದು, ಇದರೊಂದಿಗೆ, ಪೆಟ್ರೋಲ್‌ನ ಒಟ್ಟು ಅಬಕಾರಿ ಸುಂಕವು ಪ್ರತಿ ಲೀಟರ್‌ಗೆ 22.98 ರೂ.ಗೆ ಮತ್ತು ಡೀಸೆಲ್‌ನಲ್ಲಿ18.83 ರೂ.ಗೆ ಏರಿಕೆಯಾಗಿದೆ. 

ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಇತರರು ಸರ್ಕರ್ಕಾರದ ಹೆಚ್ಚಳವನ್ನು ಕ್ರಮವನ್ನು ಪ್ರತಿಭಟಿಸಿದರು.
ಈ ಸಮಯದಲ್ಲಿ, ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು. 

ಸದನ ಸಮಾವೇಶಗೊಳ್ಳುತ್ತಿದ್ದಂತೆಯೆ ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಕಾಂಗ್ರೆಸ್ ನ ಕೆಲವು ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮವನನ್ನು ಖಂಡಿಸಿದವು. ಪ್ರಶ್ನೋತ್ತರ ಸಮಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಸುಲಾಗದ ಸಾಲಗಳ ವಿಷಯವನ್ನು ಎತ್ತಿದರು. ಅವರಿಂದ ಬರಬೇಕಾದ ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನಿಡಬೇಕೆಂದೂ ಆಗ್ರಹಪಡಿಸಿದರು.

ರಾಜ್ಯಸಭೆಯಲ್ಲಿ ಕೊವಿದ್-19 ತಡೆಗಟ್ಟಲು ಅಧಿವೇಶನ ಮುಂದೂಡಿಕೆ ಮುಂತಾದ ಕ್ರಮಗಳ ಬಗ್ಗೆ ಚರ್ಚೆ

ಮಾರಕ ಕೊರೊನವೈರಸ್ ಉಲ್ಬಣವನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಮುಂದೂಡುವುದು ಸೇರಿದಂತೆ ಸೋಂಕು ತಡೆಗಟ್ಟುವ ಕ್ರಮಗಳ ಕುರಿತು ರಾಜ್ಯಸಭೆಯಲ್ಲಿ ಸೋಮವಾರ ಚರ್ಚಿಸಲಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಎಐಎಡಿಎಂಕೆ ಸದಸ್ಯ ಎಸ್.ಆರ್.ಬಾಲಸುಬ್ರಮಣ್ಯಂ, ಜನ ಸಮೂಹ ಸೇರಬಾರದೆಂದು ಸರ್ಕಾರ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಸದನವನ್ನು ನಾಳೆ ಅಥವಾ ದಿನದ ಮಟ್ಟಿಗೆ ಮುಂದೂಡಲು ಸರ್ಕಾರ ಸಿದ್ಧವಿದೆಯೇ ಎಂದು ಕೇಳಿದರು. ಸರ್ಕಾರದ ಸಲಹೆಗೆ ಹೊರತಾಗಿ ಉಭಯ ಸದನಗಳ ಸದಸ್ಯರು ಮತ್ತು ಸಂಸದೀಯ ಸಹಾಯಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಗುಂಪುಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅವರು ಗಮನ ಸೆಳೆದರು. 

SCROLL FOR NEXT