ದೇಶ

ಸಂಸತ್ತಿನ ಬಜೆಟ್ ಅಧಿವೇಶನ ಮೊಟಕುಗೊಳಿಸಲು ಮೋದಿ ನಕಾರ!

Nagaraja AB

ನವದೆಹಲಿ:ಕೊರೋನಾವೈರಸ್ ಬಗ್ಗೆ ಜಾಗೃತಿ ಮೂಡಿಸುವಂತೆ ಬಿಜೆಪಿ ಸಂಸದರಿಗೆ ಇಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ,  ದೇಶವು ಆರೋಗ್ಯ ಭೀತಿಯಲ್ಲಿ ಸಿಲುಕಿರುವ  ಸಮಯದಲ್ಲಿ ಸಂಸದರು ಮಾಡುತ್ತಿರುವ ಕೆಲಸಗಳನ್ನು ನೋಡಬೇಕು ಎಂಬ ಕಾರಣಕ್ಕೆ ಸಂಸತ್ತಿನ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಿಗದಿಯಂತೆ ಸಂಸತ್ತು ಕಾರ್ಯಕ್ರಮಗಳು ನಡೆಯಬೇಕು ಎಂದಿದ್ದಾರೆ. ಕೊರೋನಾವೈರಸ್ ಕಾರಣದಿಂದಾಗಿ ಅಧಿವೇಶನ ಮೊಟಕುಗೊಳಿಸುವಂತೆ  ಪತ್ರ ಅಥವಾ ಕರೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಆರೋಗ್ಯದ ಭೀತಿಯಿಂದ ಒಂದು ವೇಳೆ ವೈದ್ಯರು, ರೈಲು, ವಿಮಾನಯಾನದ ಸಿಬ್ಬಂದಿ ಕೆಲಸ ಮಾಡಲ್ಲ ಎಂದು ಧ್ವನಿ ಎತ್ತಿದ್ದರೆ ಏನಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಧಾನಿ, ಭಾರತದ 130 ಕೋಟಿಗೂ ಹೆಚ್ಚು ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು  ತಮ್ಮ ದೈನಂದಿನ ವ್ಯವಹಾರದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಸಂಸದರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಕೊರೋನಾವೈರಸ್ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡಬೇಕೆಂದು ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ವಿಜಯ್ ಗೋಯೆಲ್ ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾ ಸಭಾಪತಿಗಳಿಗೆ ಪತ್ರ ಬರೆದಿದ್ದರು. ಗೋಯೆಲ್ ಪತ್ರ ಮಾಧ್ಯಮಗಳಲ್ಲೂ ಹರಿದಾಡಿದ್ದರಿಂದ ಪ್ರಧಾನಿ ನರೇಂದ್ರಮೋದಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

 ಬಜೆಟ್ ಅಧಿವೇಶನ ಏಪ್ರಿಲ್ 3ರವರೆಗೂ ಮುಂದುವರೆಯಲಿದೆ.ದೇಶದ 130 ಕೋಟಿ ಜನರು ಆರೋಗ್ಯದ ಬಗ್ಗೆ ಕಳವಳಗೊಂಡಿರುವ ಸಂದರ್ಭದಲ್ಲಿ  ಸಂಸದರು ಕೊರೋನಾ ವೈರಸ್ ಬಗ್ಗೆ ಜಾಗೃತಿ ಸೇರಿದಂತೆ ಮತ್ತಿತರ ಕಾರ್ಯಗಳನ್ನು ಮಾಡಬೇಕು. ಸಂಸತ್ತು ಕಾರ್ಯಕಲಾಪಗಳು ನಡೆಯಬೇಕು ಎಂದು ಮೋದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. 

ಕೊರೋನಾ ವೈರಸ್  ನಿಯಂತ್ರಣದಲ್ಲಿ ತೊಡಗಿಸಿಕೊಂಡಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕಾರ್ಯವನ್ನು ಮೋದಿ ಶ್ಲಾಘಿಸಿದ್ದಾರೆ ಎಂದು ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸುದ್ದಿಗಾರರಿಗೆ ತಿಳಿಸಿದರು. ಬಜೆಟ್ ಅಧಿವೇಶನ ಮೊಟಕುಗೊಳಿಸುವುದನ್ನು ಜೋಷಿ ತಳ್ಳಿಹಾಕಿದರು.

SCROLL FOR NEXT