ದೇಶ

ಕಮಲ್ ನಾಥ್ ಸರ್ಕಾರ ಪತನ: ಬಿಜೆಪಿ ಸರ್ಕಾರ ಮುನ್ನಡೆಸಲು ಶಿವರಾಜ್ ಚೌಹಾಣ್ ಹೆಸರು ಮುಂಚೂಣಿಯಲ್ಲಿ

Srinivas Rao BV

ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಬಿಜೆಪಿ ರಚನೆ ಮಾಡುವ ಸರ್ಕಾರಕ್ಕೆ ಸಾರಥಿಯಾರಾಗಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. 

ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮಾರ್ ಹಾಗೂ ಮಧ್ಯಪ್ರದೇಶದ ಮಾಜಿ ಸಚಿವ ನರೋತ್ತಮ್ ಮಿಶ್ರಾ ಅವರ ಹೆಸರುಗಳು ಸಿಎಂ ರೇಸ್ ನಲ್ಲಿ ಕೇಳಿಬರುತ್ತಿವೆ. ಆದಾಗ್ಯೂ ಮಧ್ಯಪ್ರದೇಶದ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. 

ಸರ್ಕಾರ ರಚನೆ ಪ್ರಕ್ರಿಯೆಗೂ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಶೀಘ್ರವೇ ನಡೆಯಲಿದ್ದು, ಮುಖ್ಯಮಂತ್ರಿ ಯಾರಾಗಬೇಕೆಂಬುದರ ಬಗ್ಗೆ ಈವರೆಗೂ ಹೈಕಮಾಂಡ್ ನಿಂದ ಸ್ಪಷ್ಟ ನಿರ್ದೇಶನ ಲಭ್ಯವಾಗಿಲ್ಲ. 

ಚೌಹಾಣ್ ಅವರಿಗೆ ಇರುವ ಜನಪ್ರಿಯತೆ, ಆರ್ ಎಸ್ಎಸ್ ನೊಂದಿಗಿನ ಉತ್ತಮ ಸಂಬಂಧ, ಹಾಗೂ 2018 ರಲ್ಲಿ ಆಡಳಿತ ವಿರೋಧಿ ಅಲೆಯ ನಡುವೆಯೂ ಕಾಂಗ್ರೆಸ್ ಗೆ ನೀಡಿದ ಪೈಪೋಟಿಯ ನಾಯಕತ್ವವನ್ನು ಗಮನದಲ್ಲಿಟ್ಟುಕೊಂಡು ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್  ಅವರೇ ಅತ್ಯುತ್ತಮ ಆಯ್ಕೆ ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗುತ್ತಿದೆ. 

ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಗಿರುವ 22 ಶಾಸಕರ ರಾಜೀನಾಮೆಯಿಂದ ತೆರವುಗೊಂಡಿರುವ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದ್ದು, ಈ ಉಪಚುನಾವಣೆ ಮುನ್ನಡೆಸಲು ಶಿವರಾಜ್ ಸಿಂಗ್ ಚೌಹಾಣ್ ಸೂಕ್ತ ವ್ಯಕ್ತಿ ಎಂಬುದು ಪಕ್ಷದಲ್ಲಿರುವ ಹಲವು ನಾಯಕರ ಅಭಿಪ್ರಾಯವಾಗಿದೆ.

SCROLL FOR NEXT