ದೇಶ

ಮಧ್ಯಪ್ರದೇಶ: ಕಾಂಗ್ರೆಸ್ ಬಂಡಾಯ ಶಾಸಕನ ಪುತ್ರಿ ಆತ್ಮಹತ್ಯೆಗೆ ಶರಣು

Manjula VN

ಕೋಟಾ: ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರೊಬ್ಬರ ಪುತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ತಾನದ ಬರಾನ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 

ಸುರೇಶ್ ಧಕಡ್ ಅವರ ಪುತ್ರಿ ಜ್ಯೋತಿ (24) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಜ್ಯೋತಿಯವರಿಗೆ ವಿವಾಹವಾಗಿದ್ದು, ರಾಜಸ್ತಾನದಲ್ಲಿ ಪತಿಯ ಮನೆಯಲ್ಲಿ ನೆಲೆಸಿದ್ದರು. 

ಪ್ರಸ್ತುತ ಪ್ರಕರಣ ಸಂಬಂಧ ಜ್ಯೋತಿಯವರ ಸಹೋದರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವರದಕ್ಷಿಣ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. 

3 ವರ್ಷಗಳ ಹಿಂದೆಯಷ್ಟೇ ಡಾ.ಜೈ ಸಿಂಗ್ ಮೆಹ್ತಾ ಎಂಬುವವರೊಂದಿಗೆ ಜ್ಯೋತಿಯವರ ವಿವಾಹವಾಗಿತ್ತು. ಶುಕ್ರವಾರ ತನ್ನ ಪತಿಯ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದು, ನೆಲದ ಮೇಲಿ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕುತ್ತಿಗೆ ಸುತ್ತ ಕಲೆಗಳಿರುವುದು ಕಂಡು ಬಂದಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. 

 ನನ್ನ ಸಹೋದರಿ 2 ವರ್ಷಗಳ ಹಿಂದೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಳು. ಇದಾದ ಬಳಿಕ ಆಕೆಯ ಪತಿ, ಅತ್ತೆ, ಮಾವ ಹಾಗೂ ನಾದಿನಿ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಜ್ಯೋತಿಯವರ ಸಹೋದರ ಆರೋಪಿಸಿದ್ದಾರೆ. 

ಪ್ರಸ್ತುತ ಜ್ಯೋತಿಯವರ ಪತಿ ಹಾಗೂ ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. 

ಜ್ಯೋತಿ ಪತಿ ಸಿಂಗ್ ಅವರು ಶಹಬಾದ್ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜ್ಯೋತಿಯವರು ಎರಡು ವರ್ಷ ಪುತ್ರಿಯನ್ನು ಅಗಲಿದ್ದಾರೆ. 

SCROLL FOR NEXT