ದೇಶ

ಲಾಕ್ ಡೌನ್ ಆದೇಶ ಪಾಲಿಸಿ ಮನೆಯಲ್ಲೇ ಇರಿ, ಇಲ್ಲವೇ ಕಂಡಲ್ಲಿ ಗುಂಡಿಕ್ಕಲು ಆದೇಶ: ತೆಲಂಗಾಣ ಸಿಎಂ ಕೆಸಿಆರ್ ಎಚ್ಚರಿಕೆ!

Srinivasamurthy VN

ಹೈದರಾಬಾದ್: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಇರಿ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗಿಳಿದರೆ ಅಥವಾ ಪರಿಸ್ಥಿತಿ ಕೈ ಮೀರುವ ಪರಿಸ್ಥಿತಿ ಬಂದರೆ ಕಂಡಲ್ಲಿ ಗುಂಡಿಡುವಂತೆ ಪೊಲೀಸರಿಗೆ ಆದೇಶ ನೀಡಬೇಕಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಗೆ ಆದೇಶ ನೀಡಿದ್ದು, ಈ ಅವಧಿಯಲ್ಲಿ ಯಾರೂ ಕೂಡ ಹೊರಗೆ ಬಾರದಂತೆ ಮನವಿ ಮಾಡಿದ್ದರು. ಆದರೆ ಲಾಕ್ ಡೌನ್ ಇದ್ದರೂ ತೆಲಂಗಾಣದಲ್ಲಿ ಜನರ ಜಮಾವಣೆ ಎಥೇಚ್ಛವಾಗಿದ್ದು, ಜನರನ್ನು ಚದುರಿಸಲು  ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಈ ಕುರಿತ ಕಿಡಿಕಾರಿರುವ ಸಿಎಂ ಕೆಸಿಆರ್, ಕೋವಿಡ್ 19 ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಜನರು ಒಂದು ವೇಳೆ ಲಾಕ್ ಡೌನ್ ಉಲ್ಲಂಘಿಸುವುದನ್ನು ಮುಂದುವರಿಸಿದಲ್ಲಿ ಸರ್ಕಾರ ರಾಜ್ಯದಲ್ಲಿ  ಕರ್ಫ್ಯೂ ಜಾರಿಗೊಳಿಸಿ, ಶೂಟ್ ಎಂಡ್ ಸೈಟ್(ಕಂಡಲ್ಲಿ ಗುಂಡು) ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಲಾಕ್ ಡೌನ್ ಜಾರಿಯಾದರೂ ಜನರನ್ನು ನಿಯಂತ್ರಿಸಲು ಸೇನೆಯನ್ನು ಕರೆಯಲಾಗಿತ್ತು. ಒಂದು ವೇಳೆ ಜನರು ಲಾಕ್ ಡೌನ್ ಆದೇಶ ಪಾಲಿಸದೇ ಪರಿಸ್ಥಿತಿ ಕೈಮೀರುವಂತೆ ಮಾಡಿದಲ್ಲಿ 24ಗಂಟೆಯೂ ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡು ಹೊಡೆಯುವ ಆದೇಶ  ನೀಡಬೇಕಾಗುತ್ತದೆ.  ಈ ನಿಟ್ಟಿನಲ್ಲಿ ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಅಂತಹ ಸ್ಥಿತಿಗೆ ಅವಕಾಶ ಕೊಡಬೇಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಚಂದ್ರಶೇಖರ್ ಈ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಇದೇ ವೇಳೆ ಎಲ್ಲ ಶಾಸಕರು ಮತ್ತು ಕಾರ್ಪೋರೇಟರ್ ಗಳು ಜನರಿಗೆ ಲಭ್ಯವಿರಬೇಕು. ಈ ಕಠಿಣ ಸಂದರ್ಭದಲ್ಲಿ ಜನರ ಮೂಲಭೂತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು. ಅಂತೆಯೇ ಕ್ವಾರಂಟೈನ್ ಗೆ ಒಳಗಾದವರ ಪಾಸ್ ಪೋರ್ಟ್ ಅನ್ನು ಸರ್ಕಾರ ವಶಕ್ಕೆ  ಪಡೆಯುತ್ತಿದ್ದು, ಒಂದು ವೇಳೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅಂತಹವ ಪಾಸ್ ಪೋರ್ಟ್ ರದ್ದು ಮಾಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ. 

ತೆಲಂಗಾಣದಲ್ಲಿ ಇಲ್ಲಿಯವರೆಗೂ 36 ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು, 140 ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. 

SCROLL FOR NEXT