ಭೋಪಾಲ್: ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಮಧ್ಯ ಪ್ರದೇಶದ ಬಲಘಾಟ್ ಜಿಲ್ಲೆಯಲ್ಲಿ ನಡೆದಿದೆ.
ಬಲಘಾಟ್ ಜಿಲ್ಲೆಯ ಗರ್ಹಿಯ ಕುಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಡಕಟ್ಟು ವಲಸೆ ಕಾರ್ಮಿಕನೊಬ್ಬ ತನ್ನ ತಂದೆಯಿಂದಲೇ ಕೊಲೆಯಾಗಿದ್ದಾನೆ.
ವರದಿಗಳ ಪ್ರಕಾರ, ತೇಕಚಂದ್ ಪಂಚತಿಲಕ್ ಎಂಬ ಕಾರ್ಮಿಕ ಇತ್ತೀಚಿಗೆ ಹೈದರಾಬಾದ್ ನಿಂದ ತನ್ನ ಊರಿಗೆ ಮರಳಿದ್ದ. ಬಲಘಾಟ್ ಜಿಲ್ಲೆಯ ಅಧಿಕಾರಿಗಳು ಆತನನ್ನು ಒಂದು ದಿನದ ಮಟ್ಟಿಗೆ ಸಂಸ್ಥಾಕಿ ಕ್ವಾರಂಟೈನ್ ನಲ್ಲಿಟ್ಟಿದ್ದರು. ಬಳಿಕ ಮುಂದಿನ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದರು. ಅದರಂತೆ ಪಂಚತಿಲಕ್ ಅವರು ಮನೆಗೆ ತೆರಳಿದ್ದಾರೆ. ಆದರೆ ಮಗನನ್ನು ಮನೆ ಒಳಗೆ ಬಿಟ್ಟುಕೊಳ್ಳದ ಆತನ ತಂದೆ ಭೀಮಲಾಲ್ ಅವರು, ಗ್ರಾಮ ಪಂಚಾಯ್ತಿ ವ್ಯವಸ್ಥೆ ಮಾಡಿರುವ ಸಂಸ್ಥೆಯಲ್ಲೇ ಕ್ವಾರಂಟೈನ್ ಗೆ ಒಳಗಾಗು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಪಂಚತಿಲಕ್ ಒಪ್ಪಿಕೊಂಡಿಲ್ಲ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ತಾಳ್ಮೆ ಕಳೆದುಕೊಂಡ ತಂದೆ ದೊಣ್ಣೆಯಿಂದ ಮಗನ ತಲೆಗೆ ಹೊಡೆದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪಂಚತಿಲಕ್ ಅವರನ್ನು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪಂಚತಿಲಕ್ ದಾರಿ ಮಧ್ಯಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.