ಸಾಂದರ್ಭಿಕ ಚಿತ್ರ 
ದೇಶ

ಚೆನ್ನೈನ ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿವೆಯೇ?: ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ ಈ ನಿದರ್ಶನ!

ಇನ್ನು ಬದುಕಿಸಲು ಸಾಧ್ಯವಾಗುವುದಿಲ್ಲ ಎಂದು ಕಂಡುಬರುತ್ತಿದ್ದಂತೆ ಕೊರೋನಾ ಸೋಂಕಿತ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಉಲ್ಲೇಖಿಸುತ್ತಾರೆಯೇ? 

ಚೆನ್ನೈ: ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ನೋಡುತ್ತವೆ, ರೋಗಿಗಳಿಂದ ಹಣ ಸುಲಿಗೆ ಮಾಡುತ್ತವೆ ಎಂಬ ಆರೋಪ ಬಹಳ ಹಿಂದಿನಿಂದಲೂ ಇದೆ. ಚೆನ್ನೈಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವುದು ನೋಡಿದರೆ ಇದು ನಿಜವೇನೋ ಎಂಬ ಅನುಮಾನ ದಟ್ಟವಾಗುತ್ತಿದೆ.

ಇನ್ನು ಬದುಕಿಸಲು ಸಾಧ್ಯವಾಗುವುದಿಲ್ಲ ಎಂದು ಕಂಡುಬರುತ್ತಿದ್ದಂತೆ ಕೊರೋನಾ ಸೋಂಕಿತ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳುಹಿಸುತ್ತಾರೆ, ಇಲ್ಲಿನ ಕೆಲವು ಪ್ರತಿಷ್ಟಿತ ಆಸ್ಪತ್ರೆಗಳು ಕೊರೋನಾ ರೋಗಿಗಳಿಗೆ ದಿನಕ್ಕೆ 30ರಿಂದ 50 ಸಾವಿರದವರೆಗೆ ಶುಲ್ಕ ವಿಧಿಸುತ್ತದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರು ಹೇಳುತ್ತಾರೆ.

ಸರ್ಕಾರದ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ, ಕೊರೋನಾ ಸೋಂಕು ಲಕ್ಷಣ ಎಂದು ಹೇಳಿಕೊಂಡು ಬಂದ ಯಾರಿಗೇ ಆದರೂ ಪರೀಕ್ಷೆ ಮಾಡಿ ಮುಂದೆ ನೀಡಬೇಕಾದ ಚಿಕಿತ್ಸೆಗಳನ್ನು ಅದಕ್ಕೆ ಸಂಬಂಧಿಸಿದ ಸೌಕರ್ಯಗಳಿರುವ ಆಸ್ಪತ್ರೆಗಳು ನೀಡಬೇಕು. ಹೀಗೆ ಮಾಡದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ, ಆದರೆ ಚೆನ್ನೈಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲವೇ, ತಮ್ಮಿಷ್ಟದಂತೆ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ದುಬಾರಿ ಶುಲ್ಕ ವಿಧಿಸುತ್ತವೆ ಎಂಬ ಆರೋಪ ಕೇಳಿಬರುತ್ತಿದೆ.

ಚೆನ್ನೈಯ ಎರಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಅದರಲ್ಲೂ ಸ್ಟಾನ್ನಿ ಮತ್ತು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಉಲ್ಲೇಖಿಸುತ್ತಾರೆ ಎಂದು ಹೇಳುತ್ತಾರೆ.

ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಕೆಲವೇ ನಿಮಿಷಗಳಲ್ಲಿ ಇಬ್ಬರು ರೋಗಿಗಳು ಸತ್ತ ಬಳಿಕ ಈ ವಿಷಯ ಗಂಭೀರ ಚರ್ಚೆಗೆ ಬಂದಿದೆ. ಈ ಎರಡೂ ಆಸ್ಪತ್ರೆಗಳಿಗೆ ನೊಟೀಸ್ ಕಳುಹಿಸಲು ಚಿಂತಿಸಲಾಗಿತ್ತು. ನಂತರ ಮೊದಲ ಸಲ ಎಚ್ಚರಿಕೆ ನೀಡೋಣ ಎಂದು ತೀರ್ಮಾನಿಸಿದೆವು, ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕರೆತಂದ 30 ನಿಮಿಷಗಳೊಳಗೆ ತೀರಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೋಗಿಗಳು ಮೊದಲೇ ಕರೆತರಬೇಕು, ಹಗಲು ಹೊತ್ತಿನಲ್ಲಿ ತರಬೇಕು, ರಾತ್ರಿ ವೇಳೆಯಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ನಮ್ಮ ಎಚ್ಚರಿಕೆಯನ್ನು ಕೇಳದಿದ್ದರೆ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಆ ಖಾಸಗಿ ಆಸ್ಪತ್ರೆಗಳ ಹೆಸರುಗಳನ್ನು ಇಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಅವುಗಳಲ್ಲೊಂದು ಆಸ್ಪತ್ರೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಕೇಳಿದಾಗ ಸರ್ಕಾರಿ ಆಸ್ಪತ್ರೆಗೆ ಹೋಗಲು ಬಯಸುವ ರೋಗಿಗಳನ್ನು ಮಾತ್ರ ನಾವು ಇಲ್ಲಿಂದ ಕಳುಹಿಸಿದ್ದೇವೆ. ಅವರು ಡಿಕ್ಲರೇಷನ್ ಫಾರ್ಮ್ ಗೆ ಸಹಿ ಹಾಕಿದ ನಂತರವಷ್ಟೇ ಮತ್ತೊಂದು ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಮತ್ತೊಂದು ಆಸ್ಪತ್ರೆಯನ್ನು ಸಂಪರ್ಕಿಸಿ ಕೇಳಿದರೆ ನಾವಿಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆಯನ್ನೇ ನೀಡಿಲ್ಲ ಎಂದು ಹೇಳುತ್ತಾರೆ. ಆದರೆ ರೋಗಿಗಳ ಮನೆಯವರು ಹೇಳುವುದು ಬೇರೆ, ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳು ನಂತರ ಬಿಲ್ ಕಟ್ಟಲಾಗದೆ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಆಸ್ಪತ್ರೆಗಳು ದುಬಾರಿ ಶುಲ್ಕ ಹೇರುತ್ತವೆ, ದಿನಕ್ಕೆ 40ರಿಂದ 50 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತವೆ ಎನ್ನುತ್ತಾರೆ ರೋಗಿಗಳ ಮನೆಯವರು.ನಾವು ಶೇಕಡಾ 50ರಷ್ಟು ರಿಯಾಯಿತಿ ಕೊಡುತ್ತೇವೆ ಎಂಬುದು ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರ ಸಮಜಾಯಿಷಿ.

ಗರ್ಭಿಣಿಯರನ್ನೂ ಬಿಟ್ಟಿಲ್ಲ ಖಾಸಗಿ ಆಸ್ಪತ್ರೆಗಳು: ಗರ್ಭಿಣಿಯರನ್ನು ಕೂಡ ಖಾಸಗಿ ಆಸ್ಪತ್ರೆಗಳು ಸಹಾನುಭೂತಿಯಿಂದ ನೋಡುವುದಿಲ್ಲ, ಕೊರೋನಾ ಸೋಂಕು ಕಾಣಿಸಿಕೊಂಡ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಇಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದರು. ಖಾಸಗಿ ಆಸ್ಪತ್ರೆಗಳೇ ಆಂಬ್ಯುಲೆನ್ಸ್ ನಲ್ಲಿ ಇಲ್ಲಿಗೆ ತಂದುಬಿಡುತ್ತವೆ. ಇತ್ತೀಚೆಗೆ ಹೆರಿಗೆಯಾಗಿದ್ದು ಕೋವಿಡ್-19 ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಇತ್ತೀಚೆಗೆ ಟಿ. ನಗರದಲ್ಲಿ ಮತ್ತೊಬ್ಬ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕಸಿದರು. ನಂತರ ನಮ್ಮ ಇಲಾಖೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಿದ ನಂತರ ವಿಷಯ ಬಗೆಹರಿಯಿತು ಎನ್ನುತ್ತಾರೆ.

ಇಲಾಖೆ ಅಧಿಕಾರಿಗಳು ಏನು ಹೇಳುತ್ತಾರೆ?: ಈ ಬಗ್ಗೆ ಇಲಾಖೆ ಏಕೆ ಕ್ರಮ ಕೈಗೊಂಡಿಲ್ಲ ಎಂದಾಗ, ಕೆಲವು ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಕೆಲವೇ ಆಸ್ಪತ್ರೆಗಳು ಈ ರೀತಿ ದಂಧೆಯಲ್ಲಿ ತೊಡಗಿವೆ.ಅವರಿಗೆ ಎಚ್ಚರಿಕೆ ನೀಡಿದ್ದೇವೆ. ನಮ್ಮ ಮಾತು ಕೇಳುತ್ತಾರೆ ಎಂಬ ವಿಶ್ವಾಸವಿದೆ, ಇದೇ ಕ್ರಮ ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕೋವಿಡ್-19 ರೋಗಿಗಳ ಚಿಕಿತ್ಸೆ ವೆಚ್ಚ ದರವನ್ನು ಸರ್ಕಾರ ನಿಗದಿಪಡಿಸಿಲ್ಲ. ಮುಖ್ಯಮಂತ್ರಿಗಳ ವಿಸ್ತಾರ ಆರೋಗ್ಯ ವಿಮಾ ಯೋಜನೆಯಡಿ ತರಬೇಕು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT