ದೇಶ

ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಾಗಿತ್ತು: ನೀತಿ ಆಯೋಗ ಸಿಇಒ

Sumana Upadhyaya

ನವದೆಹಲಿ: ವಲಸೆ ಕಾರ್ಮಿಕರ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಉತ್ತಮವಾದ ಸೌಕರ್ಯ ಮಾಡಬಹುದಾಗಿತ್ತು. ರಾಷ್ಟ್ರಾದ್ಯಂತ ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಸಂಸ್ಥೆಗಳಿಗೆ ಪ್ರತಿಕ್ರಿಯಿಸಿದ ಅಮಿತಾಬ್ ಕಾಂತ್, ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಸರ್ಕಾರ ಸಫಲವಾಗಿದ್ದರೂ ಕೂಡ ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಮಾಡುವ ವಿಷಯದಲ್ಲಿ ಎಡವಿದೆ ಎಂದರು.

ಕಾರ್ಖಾನೆಗಳು, ನಿರ್ಮಾಣ ಕಟ್ಟಡಗಳು, ಇಟ್ಟಿಗೆ ನಿರ್ಮಾಣಗಳಲ್ಲಿ ಕೋಟ್ಯಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ನಿಂದಾಗಿ ಇದ್ದಕ್ಕಿದ್ದಂತೆ ಅವರಿಗೆ ಆಹಾರ, ಆಶ್ರಯ, ಆದಾಯ ಏನೂ ಇಲ್ಲದಂತಾಯಿತು. ಈ ತಿಂಗಳ ಆರಂಭದಲ್ಲಿ ಕೆಲಸವಿಲ್ಲದೆ ತಮ್ಮೂರಿಗೆ ಬರಿಗಾಲಿನಲ್ಲಿ ವಲಸೆ ಕಾರ್ಮಿಕರು ನೂರಾರು ಮೈಲಿಗಳನ್ನು ನಡೆದು ಹೋಗುವಾಗ ಜನರ, ಪ್ರತಿಪಕ್ಷಗಳ ಒತ್ತಡ ಕೇಳಿಬಂದಾಗ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿತು.

ಕಾರ್ಮಿಕರನ್ನು ನೋಡಿಕೊಳ್ಳುವುದನ್ನು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಭಾರತದಂತಹ ವಿಶಾಲ ದೇಶದಲ್ಲಿ ಫೆಡರಲ್ ಸರ್ಕಾರ ಸೀಮಿತ ಪಾತ್ರವನ್ನು ಹೊಂದಿದೆ. ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವುದು ಒಂದು ಸವಾಲಾಗಿತ್ತು, ರಾಜ್ಯ, ಸ್ಥಳೀಯ, ಜಿಲ್ಲಾ ಮಟ್ಟದಲ್ಲಿ ಪ್ರತಿಯೊಬ್ಬ ಕಾರ್ಮಿಕರನ್ನು ನೋಡಿಕೊಳ್ಳುವಲ್ಲಿ ಇನ್ನೂ ಉತ್ತಮ ಕೆಲಸ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT