ಹೈದರಾಬಾದ್: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ನಂತರ ಸ್ಥಗಿತಗೊಂಡಿದ್ದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವಿನ ಬಸ್ ಸಂಚಾರ ಏಳು ತಿಂಗಳ ನಂತರ ಸೋಮವಾರ ಪುನಾರಾರಂಭವಾಗಿದೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಉಭಯ ರಾಜ್ಯಗಳ ನಡುವೆ ಮತ್ತೆ ಬಸ್ ಸಂಚಾರ ಆರಂಭಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಟಿಎಸ್ಆರ್ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶಾದ್ಯಂತ ಅನ್ಲಾಕ್ 1 ಜಾರಿಯಾದ ನಂತರ ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ಕಲ್ಪಿಸಿತ್ತು. ಅದರಂತೆ ಸೆಪ್ಟೆಂಬರ್ನಲ್ಲಿ ಟಿಎಸ್ಆರ್ಟಿಸಿ ಇತರ ರಾಜ್ಯಗಳಿಗೆ ಪ್ರಯಾಣಿಕರ ಸಾಗಣೆ ಪ್ರಾರಂಭ ಮಾಡಿತು. ಆದರೆ ಆಂಧ್ರ ಪ್ರದೇಶ ಸರ್ಕಾರ ಅಂತರರಾಜ್ಯ ಬಸ್ ಸಂಚಾರಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಇದುವರೆಗೂ ಸಂಚಾರ ಆರಂಭವಾಗಿರಲಿಲ್ಲ.