ಮಥುರಾ: ಮಥುರಾದ ದೇವಾಲಯವೊಂದರಲ್ಲಿ ಮುಸ್ಲಿಮರು ನಮಾಜ್ ಮಾಡಿದ ಬೆನ್ನಲ್ಲೇ, ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರು ಯುವಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಬಿಜೆಪಿಯ ಯುವ ಘಟಕದ ಸ್ಥಳೀಯ ಮುಖಂಡನಾಗಿರುವುದಾಗಿ ಹೇಳಿಕೊಂಡಿದ್ದಾನೆ.
18ರಿಂದ 25 ವರ್ಷದೊಳಗಿನ ಯುವಕರು ಗೋವರ್ಧನ್-ಬರ್ಸಾನ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಹಿಂದೂ ಪ್ರಾರ್ಥನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹನುಮಾನ್ ಚಾಲೀಸಾ ಪಠಿಸಿದ ನಾಲ್ವರು ಯುವಕರನ್ನು ಶಾಂತಿಗೆ ಭಂಗ ತಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಸೌರಬ್ ನಂಬಾರ್ದಾರ್, ರಾಘವ್ ಮಿತ್ತಲ್, ರೌಕಿ ಮತ್ತು ಖನ್ನಾ ಅವರನ್ನು ಗೋವರ್ಧನ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಹುಲ್ ಯಾದವ್ ಅವರ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿದ್ದು, ತಲಾ 2 ಲಕ್ಷ ಶ್ಯೂರಿಟಿ ಮೇರೆಗೆ ಅವರನ್ನು ಬಿಡುಗಡೆ ಮಾಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.