ದೇಶ

ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಟ್ವೀಟ್: ಆರೋಪಿ ಮತ್ತೆ ಬಂಧನ

Srinivas Rao BV

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮತ್ತು ಅವರ ಪುತ್ರ ಕ್ಯಾಬಿನೆಟ್ ಸಚಿವ ಆದಿತ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಕಳೆದ ವಾರ ನಾಗ್ಪುರ ಪೊಲೀಸರಿಂದ ಬಂಧಿತನಾದ ಸಮೀರ್ ಠಕ್ಕರ್ ಎಂಬಾತನನ್ನು ಪುನಃ ಬಂಧಿಸಲಾಗಿದೆ.

ಸೋಮವಾರ ನಾಗ್ಪುರ ನ್ಯಾಯಾಲಯ ಜಾಮೀನು ನೀಡಿದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯವೊಂದು ಕಸ್ಟಡಿಗೆ ಪಡೆಯಲು ಅನುಮತಿ ನೀಡಿದ್ದರಿಂದ ಮುಂಬೈ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಜೂನ್ ಕೊನೆಯ ವಾರ ಮತ್ತು ಜುಲೈ ಮೊದಲ ವಾರದಲ್ಲಿ ಸಮೀರ್ ಮಾಡಿದ್ದ ಟ್ವೀಟ್ ಗಳಿಗೆ ಸಂಬಂಧಿಸಿ ಮುಂಬೈ ಪೊಲೀಸರು ಜುಲೈನಲ್ಲಿ ಎಫ್ ಐಆರ್ ದಾಖಲಿಸಿದ್ದರು. 

ಅದೇ ರೀತಿ ಜುಲೈ ಕೊನೆಯ ವಾರದಲ್ಲಿ ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿ ನಾಗ್ಪುರ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.

ಎಲ್ಲಾ ಟ್ವೀಟ್ ಗಳ ಸ್ವರೂಪ ಒಂದೇ ರೀತಿಯದ್ದಾಗಿದ್ದು, ಠಾಕ್ರೆ ಮತ್ತು ಮಹಾ ವಿಕಾಸ ಅಘಾಡಿ (ಎಂವಿಎ) ನಾಯಕರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿತ್ತು. ಮಾತ್ರವಲ್ಲ ಅಲ್ಪಸಂಖ್ಯಾತ ಸಮುದಾಯವನ್ನು ಕೂಡ ನಿಂದನಾತ್ಮಕ ಕೋಮು ದೃಷ್ಟಿಯಲ್ಲಿ ಹೀಯಾಳಿಸಲಾಗಿತ್ತು.

SCROLL FOR NEXT