ದೇಶ

ತಮಿಳುನಾಡು: ಬಿಜೆಪಿಯ ವೆಟ್ರಿವೆಲ್ ಯಾತ್ರೆ ತಡೆದ ಪೊಲೀಸರು, ಸಿಟಿ ರವಿ ಸೇರಿ ಹಲವು ನಾಯಕರ ಬಂಧನ

Lingaraj Badiger

ಚೆನ್ನೈ: ತಮಿಳುನಾಡಿನ ತಿರುಟ್ಟಾನಿಯಲ್ಲಿ ರಾಜ್ಯ ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ವೆಟ್ರಿವೆಲ್ ಯಾತ್ರೆ ನಡೆಸಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಿರಿಯ ನಾಯಕ ಎಚ್.ರಾಜಾ ಸೇರಿದಂತೆ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರ್ಕಾರದ ಅನುಮತಿ ಇಲ್ಲದೆ ಯಾತ್ರೆ ನಡೆಸಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಬಸ್‌ನಲ್ಲಿ ಕರೆದೊಯ್ಯಲಾಗಿದ್ದು, ಇಂದು ಸಂಜೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ ತಿರುಟ್ಟಾನಿ ಮುರುಗನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮುರುಗನ್ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಯಾತ್ರೆ ಹೊರಡಲು ಪ್ರಯತ್ನಿಸಿದಾಗ, ಪೊಲೀಸ್ ಸಿಬ್ಬಂದಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವೇಳೆ ಪ್ರತಿಪಕ್ಷ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಮುರಗನ್ ಅವರು, ಡಿಎಂಕೆ ನಾಯಕರು ದಶಕಗಳಿಂದ ಹಿಂದೂ ಭಾವನೆಗಳನ್ನು ಧಕ್ಕೆ ತರುತ್ತಿದ್ದಾರೆ. ಮಹಿಳೆಯರನ್ನು ಅವಮಾನಿಸಿದವರನ್ನು ಡಿಎಂಕೆ ಬೆಂಬಲಿಸಿದೆ ಎಂದು ಆರೋಪಿಸಿದರು. 

ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಹಿಂದೂ ಮತಗಳನ್ನು ಕ್ರೋಢಿಕರಿಸಲು ಬಿಜೆಪಿ ವೆಟ್ರಿ ವೇಲ್ ಯಾತ್ರೆ ನಡೆಸಲು ಮುಂದಾಗಿತ್ತು. ಯಾತ್ರೆ ನವೆಂಬರ್ 6 ರಂದು ತಿರುಟ್ಟಾನಿಯಿಂದ ಪ್ರಾರಂಭವಾಗಿ ಒಂದು ತಿಂಗಳ ನಂತರ ತಿರುಚೆಂದೂರಿನಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯಾತ್ರೆಗೆ ಅನುಮತಿ ನಿರಾಕರಿಸಿದೆ.

SCROLL FOR NEXT