ದೇಶ

ಚೆನ್ನೈ: ಟಿವಿ ವರದಿಗಾರನ ಬರ್ಬರ ಹತ್ಯೆ

Lingaraj Badiger

ಚೆನ್ನೈ: ಚೆನ್ನೈನ ಹೊರವಲಯದಲ್ಲಿ 26 ವರ್ಷದ ಟೆವಿ ವರದಿಗಾರನನ್ನು ಭಾನುವಾರ ತಡರಾತ್ರಿ ಮೂವರು ದುಷ್ಕರ್ಮಿಗಳ ಗ್ಯಾಂಗ್ ಬರ್ಬರವಾಗಿ ಕೊಲೆ ಮಾಡಿದೆ.

ಪೊರಂಬೋಕ್ ಭೂಮಿಯ ಅಕ್ರಮವಾಗಿ ಮಾರಾಟ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಹತ್ಯೆಯಾದ ವರದಿಗಾರ ಜಿ ಮೊಸೆಸ್ ಅವರ ತಂದೆ ಹೇಳಿದ್ದಾರೆ. ಆದರೆ ವರದಿಗಾರನು ಈ ವಿಷಯವನ್ನು ವರದಿ ಮಾಡಿದಿರಲು ರಿಯಲ್ಟರ್‌ನಿಂದ ಲಂಚಕ್ಕೆ ಬೇಡಿಕೆ ಇಟ್ಟ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂದ್ರಾತೂರ್‌ನ ಸೋಮಂಗಲಂ ಬಳಿಯ ನಲ್ಲೂರು ಗ್ರಾಮದ ನಿವಾಸಿಯಾಗಿದ್ದ ಮೊಸೆಸ್, ತಮಿಳನ್ ಟಿವಿಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಜ್ಞಾನರಾಜ್ ಯೇಸುದಾಸನ್ ಅವರು ಸಹ ತಮಿಳು ದಿನಪತ್ರಿಕೆಯ ವರದಿಗಾರರಾಗಿದ್ದಾರೆ.

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮೊಸೆಸ್‌ಗೆ ದೂರವಾಣಿ ಕರೆ ಬಂದ ನಂತರ ಮನೆಯಿಂದ ಹೊರಟುಹೋದ ನಂತರ ವಾಪಸ್ ಹಿಂತಿರುಗಲಿಲ್ಲ. ಮಗ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೋಗಿರುಬಹುದು ಎಂದು ಅವರ ತಂದೆ ಭಾವಿಸಿದ್ದರು. ಆದರೆ ಮೂವರು ದುಷ್ಕರ್ಮಿಗಳ ಗುಂಪು ಮೊಸೆಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಕಾಂಚೀಪುರಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಣ್ಮುಗಪ್ರಿಯ ಅವರು ತಿಳಿಸಿದ್ದಾರೆ.

ಘಟನೆ ನಡೆದು ಎರಡು ಗಂಟೆಗಳಲ್ಲಿ ಪೊಲೀಸರು ಮೂವರು ಹಂತಕರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಘ್ನೇಶ್(19), ವೆಂಕಟೇಶ್(18), ಮತ್ತು ಮನೋಜ್(19) ಎಂದು ಗುರುತಿಸಲಾಗಿದೆ.

ಆರೋಪಿಗಳ ವಿಚಾರಣೆ ವೇಳೆ, ವರದಿಗಾರನ ಹತ್ಯೆಯಲ್ಲಿ ರಿಯಾಲ್ಟರ್ ನವಮಣಿಯ ಪಾತ್ರ ಇರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT