ದೇಶ

ಬಿಹಾರ: ರಾಜ್ಯಪಾಲರನ್ನು ಭೇಟಿ ಮಾಡಿದ ನಿತೀಶ್ ಕುಮಾರ್, ನೂತನ ಸರ್ಕಾರದ ರಚನೆಯ ಹಕ್ಕು ಮಂಡನೆ

Srinivasamurthy VN

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಫಗು ಚೌಹಾಣ್ ಅವರನ್ನು ಭೇಟಿ ಮಾಡಿ ಮುಂದಿನ ಅವಧಿಗೆ ರಾಜ್ಯದಲ್ಲಿ ಹೊಸ ಎನ್‌ಡಿಎ ಸರ್ಕಾರ  ರಚಿಸುವ ಹಕ್ಕನ್ನು ಮಂಡಿಸಿದ್ದಾರೆ.

ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ನಿತೀಶ್‍ ಕುಮಾರ್ ರಾಜ್ಯಪಾಲ ಚೌಹಾಣ್ ಅವರನ್ನು ಭೇಟಿ ಮಾಡಿದರು. ನೂತನ  ಶಾಸಕರಲ್ಲದೆ, ಎಂಎಲ್‌ಸಿಗಳು ಮತ್ತು ಇತರ ಹಿರಿಯ ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ನಿತೀಶ್ ಕುಮಾರ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.

ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ರಾಜನಾಥ್ ಸಿಂಗ್ ಬಿಜೆಪಿ ಕೇಂದ್ರೀಯ ನಾಯಕತ್ವ ಕಳುಹಿಸಿದ್ದ ವೀಕ್ಷಕರಾಗಿ ಸಭೆಯಲ್ಲಿ ಹಾಜರಿದ್ದರು. ಸಭೆಯಲ್ಲಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್  ಮೋದಿ, ಬಿಜೆಪಿ ನಾಯಕರಾದ ಭೂಪೇಂದ್ರ ಯಾದವ್, ದೇವೇಂದ್ರ ಫಡ್ನವಿಸ್, ಮತ್ತು ಜೆಡಿಯು ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಎನ್‌ಡಿಎ ನಾಯಕರಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಿದ ಸಭೆಯಲ್ಲಿ ಒಕ್ಕೂಟದ ಮೈತ್ರಿ ಪಕ್ಷಗಳಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಜೀತನ್  ರಾಮ್ ಮಾಂಜಿ ಮತ್ತು ವಿಐಪಿ ಅಧ್ಯಕ್ಷ ಮುಖೇಶ್ ಸಾಹ್ನಿ ಉಪಸ್ಥಿತರಿದ್ದರು.

SCROLL FOR NEXT