ಅಂಬಾಲಾ: ಮೋದಿ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ವಿವಿಧ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಪೊಲೀಸರು ಕೊಲೆ ಯತ್ನ, ಗಲಭೆ ಸೃಷ್ಟಿಸಿದ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖ್ಯಸ್ಥ ಗುರ್ನಮ್ ಸಿಂಗ್ ಚಾರುಣಿ ಮತ್ತು ಇತರ ಹಲವು ರೈತರ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐಪಿಸಿ ಸೆಕ್ಷನ್ 307(ಕೊಲೆ ಯತ್ನ), 147 (ಗಲಭೆ), 149(ಕಾನೂನುಬಾಹಿರ ಸಭೆ), 186 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟುಮಾಡುವುದು) ಮತ್ತು 269(ಕೊರೋನಾ ಮಾರ್ಗಸೂಚಿ ಉಲ್ಲಂಘನೆ) ಅಡಿಯಲ್ಲಿ ನವೆಂಬರ್ 26 ರಂದು ಎಫ್ ಐಆರ್ ದಾಖಲಿಸಲಾಗಿದೆ.
ಹೆಡ್ ಕಾನ್ಸ್ಟೆಬಲ್ ಪರ್ದೀಪ್ ಕುಮಾರ್ ಅವರ ದೂರಿನ ಆಧಾರದ ಮೇಲೆ ಪರಾವೊ ಪೊಲೀಸ್ ಠಾಣೆಯಲ್ಲಿ ನೂರಾರು ರೈತರು ವಿರುದ್ಧ ಕೇಸ್ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಬಿಕೆಯು ಹರಿಯಾಣ ಮುಖ್ಯಸ್ಥ ಚಾರುಣಿ ಮತ್ತು ಇತರರು ಅಂಬಾಲಾದ ಮೊಹ್ರಾ ಗ್ರಾಮದ ಬಳಿ ಜಮಾಯಿಸಿದ್ದರು. ಈ ವೇಳೆ ಪೊಲೀಸ್ ತಂಡವನ್ನು ಮುನ್ನಡೆಸುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕುಮಾರ್ ಅವರು ಮುಂದೆ ಹೋಗದಂತೆ ಚಾರುಣಿಯನ್ನು ಕೇಳಿಕೊಂಡರು. ಆದರೆ ಅವರು ನಿರಾಕರಿಸಿ ಮುಂದೆ ಹೋಗಿದ್ದರಿಂದ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.