ಚೆನ್ನೈ: ಪುಣೆ ಮೂಲದ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ 'ಕೋವಿಶೀಲ್ಡ್' ಕೋವಿಡ್-19 ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿದ್ದ 40 ವರ್ಷದ ವ್ಯಕ್ತಿಯೊಬ್ಬ, ಡೋಸ್ ತೆಗೆದುಕೊಂಡ ನಂತರ ಗಂಭೀರವಾದ ನರವೈಜ್ಞಾನಿಕ ಅಡ್ಡಪರಿಣಾಮದಿಂದ ಬಳಲುತ್ತಿರುವುದಾಗಿ ಆರೋಪಿಸಿದ್ದು, 5 ಕೋಟಿ ರೂ. ಪರಿಹಾರವನ್ನು ಬಯಸಿದ್ದಾರೆ.
ಪ್ರಯೋಗದಲ್ಲಿ ಪಾಲ್ಗೊಂಡಿದ್ದವರು ಪ್ರತಿನಿಧಿಸುವ ಕಾನೂನು ಸಂಸ್ಥೆಯೊಂದು ಪರಿಹಾರ ಕೋರಿ ಎಸ್ ಐಐಗೆ ನೋಟಿಸ್ ಕಳುಹಿಸಿದೆ. ಆದರೆ, ಕೋವಿಡ್-19 ಪ್ರಯೋಗದಲ್ಲಿ ಭಾಗವಹಿಸಿದಾಗ ನೀಡಲಾದ ಔಷಧಿಯಿಂದ ಅಡ್ಡ ಪರಿಣಾಮ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪೊರೂರ್ ನ ಶ್ರೀರಾಮ ಚಂದ್ರ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಾಂಸ್ಥಿಕ ನೈತಿಕ ಸಮಿತಿ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತನಿಖೆ ನಡೆಸುತ್ತಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲ ಮತ್ತು ಔಷಧಿ ತಯಾರಿಕಾ ಸಂಸ್ಥೆ ಅಸ್ಟ್ರಾ ಜೆನಿಕಾ ಜಂಟಿಯಾಗಿ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿವೆ. ಅಲ್ಲದೇ ಇದು ಇತರ ಲಸಿಕೆಗಳಲ್ಲಿ ಇದು ಮುಂಚೂಣಿಯಲ್ಲಿದ್ದು, ಭಾರತದಲ್ಲಿ 1 ಬಿಲಿಯನ್ ಡೋಸ್ ತಯಾರಿಕೆಗಾಗಿ ಎಸ್ ಐಐ ಅಕ್ಸ್ ಫರ್ಡ್ ಮತ್ತು ಅಸ್ಟ್ರಾ ಜೆನಿಕಾ ಔಷಧಿ ತಯಾರಿಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕರು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಮತ್ತಿತರರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ಅಕ್ಟೋಬರ್ 1 ರಂದು ಲಸಿಕೆ ತೆಗೆದುಕೊಂಡ ನಂತರ ತೀವ್ರವಾದ ನರಗಳ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸ್ವಯಂ ಸೇವಕ ಆರೋಪಿಸಿರುವುದಾಗಿ ಕಾನೂನು ಸಂಸ್ಥೆ ತಿಳಿಸಿದೆ.