ದೇಶ

ತಮಿಳುನಾಡು: ಅಪಹರಣ ಆರೋಪ ತಳ್ಳಿಹಾಕಿದ ಶಾಸಕರ ಪತ್ನಿ, ಮದುವೆ ಕಾನೂನಾತ್ಮಕವಾಗಿದೆ ಎಂದ ಹೈಕೋರ್ಟ್

Lingaraj Badiger

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಶಾಸಕ ಎ ಪ್ರಭು ಅವರ ಪತ್ನಿ ಸೌಂದರ್ಯ ಅವರು, ತನ್ನನ್ನು ಅಪಹರಿಸಲಾಗಿದೆ ಎಂಬ ಕುಟುಂಬದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ನಾನು ಸಂಪೂರ್ಣ ಒಪ್ಪಿ ಮದುವೆಯಾಗಿದ್ದೇನೆ. ನನಗೆ ಯಾರೂ ಒತ್ತಡ ಹಾಕಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದ್ದಾರೆ.

ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ 19 ವರ್ಷದ ಸೌಂದರ್ಯ ಇತ್ತೀಚಿಗೆ 35 ವರ್ಷದ ಶಾಸಕ ಎ ಪ್ರಭು ಅವರೊಂದಿಗೆ ಮದುವೆಯಾಗಿದ್ದರು. ಆದರೆ ಯುವತಿ ತಂದೆ ಸ್ವಾಮಿನಾಥನ್, ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ವಿವಾಹ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ಯುವತಿ ಪೋಷಕರು ತ್ಯಾಗದುರುಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಮತ್ತು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾದ ಸೌಂದರ್ಯ, ನನ್ನ ಮದುವೆ ಸಂಪೂರ್ಣ ಒಪ್ಪಿತವಾಗಿದ್ದು, ನನ್ನನ್ನು ಯಾರೂ ಅಪಹರಿಸಿಲ್ಲ ಎಂದು ಹೇಳಿದ್ದಾರೆ. ಯುವತಿ ಹೇಳಿಕೆ ದಾಖಲಿಸಿಕೊಂಡ ಕೋರ್ಟ್, ಮದುವೆ ಕಾನೂನಾತ್ಮಕವಾಗಿದೆ ಎಂದು ಹೇಳಿದೆ.

ಕೋರ್ಟ್ ಸೌಂದರ್ಯ ಅವರಿಗೆ ಪತಿ ಜೊತೆ ವಾಸಿಸಲು ಅವಕಾಶ ನೀಡಿ, ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಸೌಂದರ್ಯ ಮತ್ತು ಪ್ರಭು ಇಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದು, ಹಲವು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಸೋಮವಾರ ಮದುವೆಯಾಗಿದ್ದು, ಈ ಮದುವೆ ತಮಿಳುನಾಡಿನಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

SCROLL FOR NEXT