ಮುಳುಗು:ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ ಚೂರಿಯಿಂದ ಇರಿದು ಟಿಆರ್ ಎಸ್ ಮುಖಂಡ ಮಧುರಿ ಭೀಮೇಶ್ವರ ರಾವ್ ಅವರನ್ನು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ವೆಂಕಟಾಪುರಂ ಮಂಡಲ್ ನ ಆಲುಬಾಕ ಗ್ರಾಮದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ.
ನಿಷೇಧಿತ ಸಿಪಿಎಂ ಸಂಘಟನೆಯ ಆರು ಮಂದಿ ಸಶ್ತ್ರಸಜ್ಜಿತರಾಗಿ ಬಂದು ಟಿಆರ್ ಎಸ್ ನಾಯಕ ಭೀಮೇಶ್ವರ ರಾವ್ ಅವರ ಮನೆಗೆ ಮಧ್ಯರಾತ್ರಿ ಹೊತ್ತಿನಲ್ಲಿ ನುಗ್ಗಿ ಅವರನ್ನು ಹೊರಗೆ ಎಳೆದು ತಂದು ಆಯುಧಗಳಿಂದ ಇರಿದು ಹತ್ಯೆಗೊಳಿಸಿದ್ದಾರೆ. ಕುಟುಂಬ ಸದಸ್ಯರು ಅತ್ತುಕೊಂಡು ಬಿಡುವಂತೆ ಕೇಳಿಕೊಂಡರೂ ಕೇಳದೆ ಇರಿದು ಹತ್ಯೆ ಮಾಡಿ ಘಟನೆ ಸ್ಥಳದಲ್ಲಿ ಬರಹವೊಂದನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಭೀಮೇಶ್ವರ್ ರಾವ್ ಕೀಟನಾಶಕ ಕಂಪೆನಿಯೊಂದನ್ನು ಹೊಂದಿದ್ದರು. ಭೀಮೇಶ್ವರ್ ರಾವ್ ರೈತರಿಗೆ ಅಧಿಕ ಬೆಲೆಗೆ ಕೀಟನಾಶಕಗಳನ್ನು ಮಾರಾಟ ಮಾಡಿ ಮೋಸ ಮಾಡುತ್ತಿದ್ದರು ಎಂದು ಮಾವೋವಾದಿಗಳು ಆಪಾದಿಸಿದ್ದಾರೆ. ಭೀಮೇಶ್ವರ ರಾವ್ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಗ್ರಾಮದಲ್ಲಿ ತಮ್ಮ ಇರುವಿಕೆಯನ್ನು ತೋರಿಸಲು ಮಾವೋವಾದಿಗಳು ಟಿಆರ್ ಎಸ್ ನಾಯಕನನ್ನು ಕೊಂದು ಹಾಕಿದ್ದಾರೆ ಎಂದು ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ.