ದೇಶ

ತ್ರಿವಳಿ ತಲಾಕ್ ವಿರುದ್ದದ ಹೋರಾಟಗಾರ್ತಿ ಷಾಹಿರಾ ಬಾನುಗೆ ಮಹತ್ವದ ಹುದ್ದೆ ಕಲ್ಪಿಸಿದ ಬಿಜೆಪಿ

Manjula VN

ಡೆಹ್ರಾಡೂನ್: ತ್ರಿವಳಿ ತಲಾಖ್ ರದ್ಧತಿಗಾಗಿ ಹೋರಾಟ ನಡೆಸಿದ್ದ ಷಾಹಿರಾ ಬಾನು ಅವರನ್ನು ಉತ್ತರಾಖಂಡ್ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ. 

ಆಕೆ ಆಡಳಿತಾರೂಡ ಬಿಜೆಪಿ ಸೇರಿದ 10 ದಿನಗಳಲ್ಲಿಯೇ ಈ ಸ್ಥಾನಮಾನ ಲಭಿಸಿದೆ. ಇದು ರಾಜ್ಯ ಸಚಿವಸ್ಥಾನಮಾನ ಹೊಂದಿರುವ ಹುದ್ದೆಯಾಗಿದೆ. ತ್ರಿವಳಿ ತಲಾಕ್ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದವರ ಪೈಕಿ ಷಾಹಿರಾ ಬಾನು ಮುಖ್ಯ ಆರ್ಜಿದಾರೆಯಾಗಿದ್ದರು. 

ಷಾಹಿರಾ ಬಾನು, ಜ್ಯೋತಿ ಷಾ, ಪುಷ್ಪ ಪಾಸ್ವಾನ್ ಅವರುಗಳನ್ನು ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿ ರಾಜ್ಯ ಸರ್ಕಾರ ಮಂಗಳವಾರ ನೇಮಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ಮಾತನಾಡಿ, ಈ ನೇಮಕಾತಿಗಳು ಮಹಿಳೆಯರ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ಹಾಗೂ ಆಯೋಗದಲ್ಲಿ ಬಾಕಿ ಇರುವ ಎಲ್ಲಾ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ನೆರವಾಗಲಿವೆ ಎಂದು ಹೇಳಿದ್ದಾರೆ.

ಉತ್ತರಾಖಂಡದ ಉದಮ್ ಸಿಂಗ್ ನಗರ ಜಿಲ್ಲೆಯ ಷಾಹಿರಾ ಬಾನು ಅವರಿಗೆ, ಅವರ ಪತಿ ಸ್ಪೀಡ್ ಪೋಸ್ಟ್ ಮೂಲಕ ವಿಚ್ಚೇಧನ ನೀಡಿದ್ದರು. ನಾಲ್ಕು ತಿಂಗಳ ನಂತರ, ಅಂದರೆ, 2014 ರಲ್ಲಿ, ದಿಢೀರ್ ತ್ರಿವಳಿ ತಲಾಖ್ ವಿರುದ್ಧ ಅವರು ಸುಪ್ರೀಂ ಕೋರ್ಟ್ ಗೆ ಆರ್ಜಿಸಲ್ಲಿಸಿದ್ದರು. ಇತರ ಆರ್ಜಿಗಳೊಂದಿಗೆ ಈ ಆರ್ಜಿಯನ್ನು ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ದಿಢೀರ್ ತ್ರಿವಳಿ ತಲಾಖ್ ನೀಡುವುದು ಅಸಂವಿಧಾನಿಕ ಕ್ರಮ ಎಂದು 2017 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ತರುವಾಯ, ಕೇಂದ್ರ ಸರ್ಕಾರ ಮುಸ್ಲಿಂ ಮಹಿಳಾ ವಿವಾಹ ಹಕ್ಕುಗಳ ಸಂರಕ್ಷಣಾ ಕಾಯ್ದೆ, 2019 ಅನ್ನು ಜಾರಿಗೆ ತಂದಿತ್ತು.

SCROLL FOR NEXT