ದೇಶ

ಸೊಮಾಲಿಯಾದಲ್ಲಿ ಸಿಲುಕಿರುವ 33 ಭಾರತೀಯರನ್ನು ಕರೆತರಲು ಯತ್ನ: ಜೈಶಂಕರ್

Shilpa D

ನವದೆಹಲಿ: ಸೊಮಾಲಿಯಾದಲ್ಲಿ ಸಿಲುಕಿರುವ 33 ಭಾರತೀಯರನ್ನು ತಾಯ್ನಾಡಿಗೆ ವಾಪಸ್‌ ಕರೆತರಲು ಪ್ರಯತ್ನಗಳನ್ನು ಮಾಡುತ್ತಿದ್ದು ನೈರೊಬಿಯಲ್ಲಿನ ರಾಜತಾಂತ್ರಿಕ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಉತ್ತರ ಪ್ರದೇಶದ 25 ಕಾರ್ಮಿಕರು ಸೇರಿದಂತೆ 33 ಭಾರತೀಯರನ್ನು ಸೊಮಾಲಿಯಾದ ಕಂಪನಿಯೊಂದು ಒತ್ತೆಯಾಗಿರಿಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

10 ತಿಂಗಳ ಹಿಂದೆ 33 ಭಾರತೀಯ ಕಾರ್ಮಿಕರು ಈ ಕಂಪನಿಗೆ ಸೇರ್ಪಡೆಯಾಗಿದ್ದರು. ಮೊದಲ ಎರಡು ತಿಂಗಳು ಅವರೊಂದಿಗೆ ಉತ್ತಮವಾಗಿ ವ್ಯವಹರಿಸಲಾಗುತ್ತಿತ್ತು. ಎರಡು ತಿಂಗಳ ಬಳಿಕ ವೇತನವನ್ನೂ ನೀಡದೆ ತೊಂದರೆ ಕೊಡುತ್ತಿದ್ದಾರೆ ಎನ್ನಲಾಗಿದೆ.

ಸೊಮಾಲಿಯಾದ ಮೊಗದಿಶುವಿನಲ್ಲಿ ಸಿಲುಕಿರುವ 33 ಭಾರತೀಯ ಕಾರ್ಮಿಕರಿಗೆ ಪರಿಹಾರ ಒದಗಿಸಲು ಹಾಗೂ ಅವರನ್ನು ಭಾರತಕ್ಕೆ ವಾಪಸ್‌ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನೈರೊಬಿಯಲ್ಲಿನ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿರುವ ಸೊಮಾಲಿಯಾದ ರಾಯಭಾರ ಕಚೇರಿಯೊಂದಿಗೆ ಈ ಬಗ್ಗೆ ಮಾತುಕತೆ
ನಡೆಸಲಾಗುತ್ತಿದೆ’ ಎಂದು ಜೈಶಂಕರ್‌ ತಿಳಿಸಿದ್ದಾರೆ.

SCROLL FOR NEXT