ದೇಶ

ಉತ್ತರ ಪ್ರದೇಶ: ಬಂಡಾಯವೆದ್ದ ಆರು ಬಿಎಸ್ ಪಿ ಶಾಸಕರು, ಮಾಯಾವತಿ ಪಕ್ಷ ತೊರೆಯುವ ಸಾಧ್ಯತೆ

Lingaraj Badiger

ಲಖನೌ: ಬಹುಜನ ಸಮಾಜ ಪಕ್ಷ(ಬಿಎಸ್ ಪಿ)ದ ಆರು ಶಾಸಕರು ಬಂಡಾಯವೆದ್ದಿದ್ದು, ಮಾಯಾವತಿ ಪಕ್ಷ ತೊರೆಯುವ ಸಾಧ್ಯತೆ ಇದೆ.

ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಏಕೈಕ ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪಿಸಿದ್ದ 10 ಶಾಸಕರಲ್ಲಿ ನಾಲ್ವರು ಬೆಂಬಲ ಹಿಂತೆಗೆದುಕೊಳ್ಳುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ.

ಈ ನಾಲ್ವರು ಶಾಸಕರು ಇತರ ಇಬ್ಬರು ಶಾಸಕರೊಂದಿಗೆ ರಿಟರ್ನಿಂಗ್ ಅಧಿಕಾರಿಯನ್ನು ಭೇಟಿಯಾಗಿದ್ದು, ಪಕ್ಷದ ಹಿರಿಯ ಮುಖಂಡ, ರಾಜ್ಯಸಭಾ ಅಭ್ಯರ್ಥಿ ರಾಮ್ ಜಿ ಗೌತಮ್ ಅವರ ನಾಮಪತ್ರದಲ್ಲಿನ ತಮ್ಮ ಸಹಿ "ನಕಲಿ" ಎಂದು ಲಿಖಿತವಾಗಿ ದೂರಿದ್ದಾರೆ.

ಬಂಡಾಯ ಶಾಸಕರಲ್ಲಿ ಒಬ್ಬರು, ತಾವು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಆರು ಶಾಸಕರ ಗುಂಪಿನಲ್ಲಿದ್ದ ಕೆಲವರು, ಪಕ್ಷ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಲ್ವರು ಬಂಡಾಯ ಶಾಸಕರಾದ ಅಸ್ಲಂ ರೈನಿ, ಅಸ್ಲಂ ಚೌಧರಿ, ಮುಜತಾಬಾ ಸಿದ್ದಿಕಿ ಮತ್ತು ಹಕೀಮ್ ಲಾಲ್ ಬೈಂಡ್ ಅವರು ತಮ್ಮ ಸಹಿ ನಕಲಿ ಮಾಡಲಾಗಿದೆ ಎಂದು ರಿಟರ್ನಿಂಗ್ ಅಧಿಕಾರಿಗೆ ದೂರು ನೀಡಿದ್ದಾರೆ. ಒಂದು ನಕಲಿ ಸಹಿ ಮಾಡಿರುವುದು ಸಾಬೀತಾದರೆ ರಾಜ್ಯಸಭಾ ಅಭ್ಯರ್ಥಿ ರಾಮ್ ಜಿ ಗೌತಮ್ ಅನರ್ಹಗೊಳ್ಳಲಿದ್ದಾರೆ.

SCROLL FOR NEXT