ದೇಶ

ವೈದ್ಯಕೀಯ ಸಂಶೋಧನೆಗೆ ಹೆಚ್ಚಿನ ಹೂಡಿಕೆ ಅಗತ್ಯ: ಕಿರಣ್‍ ಮಜುಂದಾರ್ ಶಾ

Srinivasamurthy VN

ಮಂಗಳೂರು: ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗಗಳ ದಾಳಿ ಮತ್ತು ಮಧುಮೇಹ ಮತ್ತು ಕ್ಯಾನ್ಸರ್ ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಎದುರಿಸಲು ವೈದ್ಯಕೀಯ ಸಂಶೋಧನೆಯಲ್ಲಿ ಹೂಡಿಕೆಯನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಬಯೋಕಾನ್ ಸಂಸ್ಥೆಯ ಅಧ್ಯಕ್ಷರಾದ ಕಿರಣ್  ಮಜುಂದಾರ್ ಶಾ ಅವರು ಬುಧವಾರ ಪುನರುಚ್ಚರಿಸಿದ್ದಾರೆ.

‘ಭಾರತದಂತಹ ದೇಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ತನ್ನ ರಾಷ್ಟ್ರೀಯ ಕಾರ್ಯಸೂಚಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಹೂಡಿಕೆಯ ಆದ್ಯತೆಯ ಕ್ಷೇತ್ರವೆಂದು ಪರಿಗಣಿಸಬೇಕು’ ಎಂದು ಅವರು ಇಂದು ನಡೆದ ಯೆನೆಪೋಯಾ (ಸ್ವಾಯತ್ತ ವಿಶ್ವವಿದ್ಯಾಲಯ)ದ ಹತ್ತನೇ ಘಟಿಕೋತ್ಸವ ಭಾಷಣದಲ್ಲಿ ಹೇಳಿದ್ದಾರೆ.

‘ದೇಶಕ್ಕೆ ಅತ್ಯಮೂಲ್ಯವಾದ ಸಂಪನ್ಮೂಲಗಳಾಗಿ ವೈದ್ಯಕೀಯ ಭ್ರಾತೃತ್ವದ ಬಗ್ಗೆ ಕೋವಿಡ್‍-19 ಗಮನ ಸೆಳೆದಿದೆ. ವೈದ್ಯರು ಸಂಶೋಧನೆಯ ವಿಷಯದಲ್ಲಿ ಸಮಾಜಕ್ಕೆ ಸ್ಫೂರ್ತಿ ನೀಡಬೇಕು.’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ವೈದ್ಯಕೀಯ ಸಂಶೋಧನೆಗಳ ಲಾಭವನ್ನು ಸಾಂಕ್ರಾಮಿಕ ರೋಗಗಳ ವಿರುದ್ಧ ಸಶಕ್ತವಾಗಿ ಪ್ರತಿರೋಧ ನೀಡಲು ಬಳಸಬಹುದು. ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಹಾಗೆಯೇ ಭಾರತದಲ್ಲಿ ಸರ್ವರಿಗೂ ಕೈಗೆಟುಕುವ ರೀತಿಯಲ್ಲಿ ಹೊಸ ಸಂಶೋಧನೆಗಳ ಲಾಭ ದೊರಕು  ವಂತಾಗಬೇಕು ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪದವಿ ಪುರಸ್ಕಾರದ ಪಟ್ಟಿಯನ್ನು ಮಂಡಿಸಿದರು. ಒಟ್ಟು 750 ಪಿಎಚ್‌ಡಿ, ಎಂ.ಸಿ.ಎಚ್.ಡಿ.ಎಂ./ಎಂ.ಡಿ ಎಂ., ಎಂ.ಡಿ ಎಂ.ಎಸ್, ಎಂ.ಡಿ.ಎಸ್.ಎಂ. ಎಸ್ಸಿ (ಶುಶ್ರೂಷೆ), ಎಂಪಿಟಿ ಸ್ನಾತಕೋತ್ತರ ಡಿಪ್ಲೋಮ ಮತ್ತು ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ (ಶುಶ್ರೂಷೆ) ಬಿಪಿಟಿ  ಹಾಗೂ ಬಿ.ಕಾಮ್, ಬಿ.ಎಸ್ಸಿ, ಬಿಸಿಎ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಎಂಬಿಬಿಎಸ್, ಬಿಡಿಎಸ್, ಬಿಎಚ್‌ಎ, ಬಿಎಸ್ಸಿ (ಶುಶ್ರೂಷೆ) ಬಿಪಿಟಿ ಹಾಗೂ ಬಿ.ಕಾಂನಲ್ಲಿ ಅತ್ಯುನ್ನತ ಫಲಿತಾಂಶ ದಾಖಲಿಸಿದವರಿಗೆ ಸುವರ್ಣ ಪದಕ ನೀಡಿ ಗೌರವಿಸಲಾಯಿತು. ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ  ಯೆನೆಪೊಯ ಅಬ್ದುಲ್ಲ ಕುಂಞಿ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ಪದವಿ ಪ್ರಧಾನ ಮಾಡಿದರು.

ಉಪಕುಲಪತಿ ಡಾ.ವಿಜಯಕುಮಾರ್ ಸ್ವಾಗತಿಸಿ, ವಿಶ್ವವಿದ್ಯಾನಿಲಯದ ವಾರ್ಷಿಕ ವರದಿ ಮಂಡಿಸಿದರು. ವಿಶ್ವವಿದ್ಯಾನಿಲಯದ ಪರೀಕ್ಷಾಂಗ ನಿಯಂತ್ರಣಾಧಿಕಾರಿ ಡಾ.ಬಿ.ಟಿ. ನಂದೀಶ್ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಕೆ.ಎಸ್.  ವಂದಿಸಿದರು. ಡಾ.ಮಲ್ಲಿಕಾ ಶೆಟ್ಟಿ ಮತ್ತು ಡಾ.ರೋಶಲ್ ಟೆಲಿಸ್ ಕಾರ್ಯಕ್ರಮ ನಿರೂಪಿಸಿದರು.

SCROLL FOR NEXT