ಭೋಪಾಲ್: ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಲು ನನಗೆ ಸಚಿವ ಸ್ಥಾನ ಹಾಗೂ 50 ಕೋಟಿ ರೂಪಾಯಿ ನೀಡುವ ಆಮಿಷ ಒಡ್ಡಿದ್ದರು ಎಂದು ಮಧ್ಯ ಪ್ರದೇಶ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಉಮಾಂಗ್ ಸಿಂಘರ್ ಅವರು ಅವರು ಶನಿವಾರ ಆರೋಪಿಸಿದ್ದಾರೆ.
ಉಪ ಚುನಾವಣೆ ನಡೆಯುತ್ತಿರುವ ಬದ್ನವಾರ್ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೂರು ಬಾರಿ ಶಾಸಕರಾಗಿರುವ ಉಮಾಂಗ್ ಅವರು, ಏಳು ತಿಂಗಳ ಹಿಂದೆ ಸಿಂಧಿಯಾ ಅವರು ನನಗೆ 50 ಕೋಟಿ ರೂ. ಹಾಗೂ ಸಚಿವ ಸ್ಥಾನದ ಆಮಿಷ ನೀಡಿದ್ದರು ಎಂದರು.
“ಅನೇಕ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಹೋದಾಗ, ನನಗೆ ಕಾಂಗ್ರೆಸ್ನಲ್ಲಿ ಭವಿಷ್ಯವಿಲ್ಲ ಎಂದು ಸಿಂಧಿಯಾ ಜಿ ಹೇಳಿದ್ದರು. ನಾನು ಬಿಜೆಪಿಗೆ ಸೇರಿದರೆ, ನನಗೆ 50 ಕೋಟಿ ರೂ. ಮತ್ತು ಮಂತ್ರಿ ಹುದ್ದೆ ಸಿಗುತ್ತದೆ, ಇದಕ್ಕಾಗಿ ಈಗಾಗಲೇ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದಿದ್ದರು. ಆದರೆ ನಾನು ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದೇನೆ ಮತ್ತು ನಾವು ವಿಭಿನ್ನ ಹಾದಿಯಲ್ಲಿ ಸಾಗುತ್ತಿದ್ದೇವೆ. ಅವಕಾಶವಾದಿ ರಾಜಕೀಯವನ್ನು ನಾನು ಎಂದಿಗೂ ನಂಬುವುದಿಲ್ಲ ಎಂದು ಸಿಂಧಿಯಾಗೆ ತಿಳಿಸಿದೆ ”ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಬಿಜೆಪಿಗೆ ನವೆಂಬರ್ 3 ರ ಉಪಚುನಾವಣೆಯಲ್ಲಿ ಹೀನಾಯ ಸೋಲ ಅನುಭವಿಸುವ ಸುಳಿವು ಸಿಕ್ಕಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಈಗಾಗಲೇ ಪ್ಲ್ಯಾನ್ ಬಿ ಸಿದ್ಧ ಮಾಡಿಕೊಂಡಿದ್ದು, ಮತ್ತಷ್ಟು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ದೂರಿದರು.