ದೇಶ

ಸಂವಿಧಾನದ ರಕ್ಷಣೆಗಾಗಿ ಇಂದಿರಾ ವಿರುದ್ಧ ಕಾನೂನು ಸಮರ ನಡೆಸಿದ್ದ ಸ್ವಾಮಿ ಕೇಶವಾನಂದ ಭಾರತಿ ಬ್ರಹ್ಮೈಕ್ಯ 

Srinivas Rao BV

ಸಂವಿಧಾನದ ರಕ್ಷಣೆಗಾಗಿ,  ಸರ್ಕಾರ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಕಾನೂನು ಸಮರ ನಡೆಸಿದ್ದ ಕೇರಳದ ಎಡನೀರು ಮಠದ ಶ್ರೀಗಳಾದ ಕೇಶವಾನಂದ ಭಾರತೀ ಸ್ವಾಮಿಗಳು (79) ಸೆ.06 ರಂದು ಕಾಸರಗೋಡಿನ ಮಠದಲ್ಲಿ ಬ್ರಹ್ಮೈಕ್ಯರಾಗಿದ್ದಾರೆ. 

ಸಂವಿಧಾನದ ರಕ್ಷಕರೆಂದೇ ಖ್ಯಾತರಾಗಿದ್ದ ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮಿಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು.

ಕೇಶವಾನಂದ ಭಾರತೀ v/s ಸ್ಟೇಟ್ ಆಫ್ ಕೇರಳ ಪ್ರಕರಣದ ತೀರ್ಪನ್ನು ಹಲವು ಬಾರಿ ನ್ಯಾಯಾಂಗ ವಿಚಾರಣೆ ಹಾಗೂ ಪ್ರಕ್ರಿಯೆಗಳಲ್ಲಿ ಉಲ್ಲೇಖಿಸಲಾಗುತ್ತದೆ. 

1970ರ ಫೆಬ್ರವರಿ ತಿಂಗಳಿನಲ್ಲಿ ಕೇರಳ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ಅನುಸಾರ ಕಾಸರಗೋಡಿನ ಬಳಿಯಿರುವ ಎಡನೀರು ಮಠಕ್ಕೆ ಸೇರಿದ ಆಸ್ತಿಗಳ ಸ್ವಾಧೀನ ಕುರಿತು ನೋಟೀಸು ಜಾರಿ ಮಾಡುತ್ತದೆ. ಕೇರಳ ರಾಜ್ಯ ಸರ್ಕಾರದ ಭೂಸುಧಾರಣೆ ಕುರಿತು ಮಠದ ಸ್ವಾಮೀಜಿಗಳಾದ ಸ್ವಾಮಿ ಕೇಶವಾನಂದ ಭಾರತಿಯವರು ನ್ಯಾಯವಾದಿಗಳಾದ ನಾನಾಭೋಯ್ ಫಾಲ್ಕಿವಾಲಾ ಅವರ ಸಲಹೆಯ ಮೇರೆಗೆ ಭಾರತದ ಸಂವಿಧಾನದ ಆರ್ಟಿಕಲ್ 26ರ ಅನುಸಾರ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಕೇಸು ದಾಖಲಿಸುತ್ತಾರೆ. ದೇಶದ ನಾಗರೀಕರು ಆಸ್ತಿ ಹೊಂದುವುದು ಮೂಲಭೂತ ಹಕ್ಕೋ ಅಲ್ಲವೋ ಎನ್ನುವುದು ಈ ಕೇಸಿನ ಮುಖ್ಯ ವಸ್ತುವಾಗುತ್ತದೆ. ಹಾಗು ಮೂಲಭೂತ ಹಕ್ಕುಗಳ ಮಾನ್ಯತೆ ಬಗ್ಗೆ ವಿಸ್ಮೃತ ಚರ್ಚೆಗೆ ಈ ಕೇಸು ನಾಂದಿಯಾಗುತ್ತದೆ. ಈ ಕೇಸಿನ ಕುರಿತಾಗಿ ನ್ಯಾಯಾಲಯದಲ್ಲಿ ಬರೋಬ್ಬರಿ 68 ದಿನಗಳ ಕಾಲ ವಾದ ಪ್ರತಿವಾದಗಳು ನಡೆಯುತ್ತವೆ. 1972ರ ಅಕ್ಟೋಬರ್ 31 ರಂದು ಆರಂಭವಾದ ವಾದ ಪ್ರತಿವಾದಗಳು 1973 ರ ಮಾರ್ಚ್ 23 ಸಮಾಪ್ತಿಯಾಗುತ್ತವೆ. ಈ ಕೇಸಿನ ಕುರಿತಾಗಿ ಬಂದ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗು ಭಾರತದ ಸಂವಿಧಾನದ ಕುರಿತಾದ ಮಹತ್ತರ ಮೈಲಿಗಲ್ಲಾಗಿದೆ.

ಅದ್ವೈತ ತತ್ವದ ದೃಢ ಅನುಯಾಯಿಗಳಾಗಿದ್ದ ಕೇಶವಾನಂದ ಭಾರತೀ ಸ್ವಾಮಿಗಳವರು ಕೇವಲ 29 ವರ್ಷ ವಯಸ್ಸಿನವರಾಗಿದ್ದಾಗ ಸಂವಿಧಾನದ 29 ನೇ ತಿದ್ದುಪಡಿ ಕಾಯ್ದೆ, 1972 ರನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.

SCROLL FOR NEXT