ದೇಶ

ಅಂಕಪಟ್ಟಿಯ ಒತ್ತಡವನ್ನು ತೆಗೆದುಹಾಕುವುದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿ:ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ-2020 ನವ ಭಾರತದ ಹೊಸ ಆಕಾಂಕ್ಷೆಗಳು ಮತ್ತು ಹೊಸ ಆಶಯಗಳನ್ನು ಈಡೇರಿಸಲು ಇರುವ ಮಾರ್ಗವಾಗಿದೆ. ದೇಶಾದ್ಯಂತ ಎಲ್ಲರೂ ಒಟ್ಟಾಗಿ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಶಿಕ್ಷಣ ನೀತಿಗೆ ಸಂಬಂಧಪಟ್ಟವರ ಸತತ ಪರಿಶ್ರಮ, ಅವಿರತ ಕಠಿಣ ಕೆಲಸದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಇನ್ನೂ ಇದರ ಕೆಲಸ ಮುಗಿದಿಲ್ಲ. ಇದು ಕೇವಲ ಆರಂಭವಷ್ಟೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮಾರ್ಗ ನಮ್ಮ ಮುಂದಿದೆ ಎಂದು ಹೇಳಿದರು.

ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ , 21ನೇ ಶತಮಾನದಲ್ಲಿ ಶಾಲಾ ಶಿಕ್ಷಣ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಪೂರ್ವ ತರಗತಿ ಮನೆಯಿಂದ ಹೊರಗಿನ ಅನುಭವ ಪಡೆದುಕೊಳ್ಳಲು ಮಕ್ಕಳಿಗೆ ಮೊದಲ ಹೆಜ್ಜೆಯಾಗಿದೆ. ವಿನೋದದ ಮೂಲಕ ಕಲಿಕೆ, ಚಟುವಟಿಕೆ ಮೂಲಕ ಕಲಿಕೆ ಮತ್ತು ಶೋಧನೆ ಮೂಲಕ ಒಂದು ಕೇಂದ್ರಿತವಾಗಿ ಮಕ್ಕಳು ಕಲಿಯಲು ಸಾಧ್ಯವಾಗುವುದು ಶಿಕ್ಷಕರ ಮೂಲಕ. ನವ ಭಾರತದ ಉದಯಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸರಿಯಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿತೋರಿಸಬೇಕು. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಯೋಗ, ಕುತೂಹಲ ಮತ್ತು ಸಂವಹನ ಪ್ರವೃತ್ತಿ ಮಕ್ಕಳಲ್ಲಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ನೂತನ ಶಿಕ್ಷಣ ನೀತಿ ನವ ಭಾರತ ಉದಯಕ್ಕೆ ಬೀಜ ಬಿತ್ತಲಿದ್ದು 21ನೇ ಶತಮಾನಕ್ಕೆ ಹೊಸ ದಿಕ್ಕು ನೀಡಬೇಕು, ವಿದ್ಯಾರ್ಥಿಗಳು 21ನೇ ಶತಮಾನದಲ್ಲಿ ಈ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಲೆಗಳಲ್ಲಿ ಪರೀಕ್ಷೆ ನಡೆಸಿ ನೀಡಲಾಗುವ ಅಂಕಪಟ್ಟಿ ಮಕ್ಕಳಿಗೆ ಒತ್ತಡದ ಪಟ್ಟಿಯಾಗಿ ಪರಿಣಮಿಸಿದರೆ ಪೋಷಕರಿಗೆ ತಮ್ಮ ಮಕ್ಕಳ ಪ್ರತಿಷ್ಠೆಯ ಪಟ್ಟಿಯಾಗಿದೆ. ಈ ಮನೋಭಾವನೆ, ಒತ್ತಡವನ್ನು ತೆಗೆದುಹಾಕುವುದೇ ನೂತನ ಶಿಕ್ಷಣ ನೀತಿಯ ಗುರಿಯಾಗಿದೆ. ಓದಿಗಾಗಿ-ಕಲಿಕೆ, ಕಲಿಕೆಗಾಗಿ-ಒದು ಎಂಬ ಉದ್ದೇಶ ಮಕ್ಕಳ ವಿದ್ಯಾರ್ಥಿ ದೆಸೆಯಲ್ಲಿ ಆಗಬೇಕು. ಸಾಕ್ಷರತೆಯ ಬುನಾದಿ ಭದ್ರವಾಗಬೇಕು. ಮೂರನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಬಾಲಕ ನಿಮಿಷಕ್ಕೆ 30ರಿಂದ 40 ಶಬ್ದಗಳನ್ನು ಓದಬೇಕು.  ಮಕ್ಕಳ ಕಲಿಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಳಿಸಬೇಡಿ. ಮಕ್ಕಳಲ್ಲಿ ಗಣಿತಶಾಸ್ತ್ರೀಯ ಮತ್ತು ವೈಜ್ಞಾನಿಕ ಯೋಚನೆಯನ್ನು ಬೆಳೆಸುವ ಕೆಲಸ ನೂತನ ಶಿಕ್ಷಣ ನೀತಿಯಲ್ಲಾಗಬೇಕಿದೆ ಎಂದು ಪ್ರಧಾನಿ ಹೇಳಿದರು. 

SCROLL FOR NEXT