ಚೆನ್ನೈ: ತಮಿಳುನಾಡಿನ ನಟ ಸೂರ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸದಂತೆ ಮದ್ರಾಸ್ ಹೈಕೋರ್ಟ್ ನ 6 ನಿವೃತ್ತ ನ್ಯಾಯಾಧೀಶರು ಮನವಿ ಮಾಡಿದ್ದಾರೆ.
ನ್ಯಾ.ಎಸ್ಎಂ ಸುಬ್ರಹ್ಮಣಿಯನ್ ಅವರು ಮದ್ರಾಸ್ ಹೈಕೋರ್ಟ್ ನ ನ್ಯಾ.ಎಪಿ ಸಾಹಿ ಅವರಿಗೆ ಸೂರ್ಯ ವಿರುದ್ಧ ಕ್ರಿಮಿನಲ್ ಕಂಟೆಪ್ಟ್ ಪ್ರಕ್ರಿಯೆಗಳನ್ನು ಮುಂದುವರೆಸದಂತೆ ಮನವಿ ಮಾಡಿ ಪತ್ರ ಬರೆದಿದ್ದು, ಈ ಪತ್ರಕ್ಕೆ 6 ಮಾಜಿ ನ್ಯಾಯಮೂರ್ತಿಗಳು ಬೆಂಬಲಿಸಿದ್ದಾರೆ.
ಎನ್ ಇಇಟಿ ಪರೀಕ್ಷೆ ನಡೆಸುವಂತೆ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದ ಸೂರ್ಯ, ಕೋರ್ಟ್ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯದಾನ ನೀಡುತ್ತಿವೆ. ಆದರೆ ವಿದ್ಯಾರ್ಥಿಗಳಿಗೆ ಎನ್ಇಇಟಿ ಪರೀಕ್ಷೆಗಳನ್ನು ಮಾತ್ರ ಯಾವುದೇ ಭಯವಿಲ್ಲದೇ ತೆಗೆದುಕೊಳ್ಳಲು ಹೇಳುತ್ತಿವೆ ಎಂದಿದ್ದರು.
ನಿವೃತ್ತ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ ಚಂದ್ರು, ಕೆ ಎನ್ ಬಾಷಾ, ಟಿ ಸುದಂತಿರಾಮ್, ಡಿ ಹರಿಪರಂತಮನ್, ಕೆ ಕಣ್ಣನ್ ಮತ್ತು ಜಿ ಎಂ ಅಕ್ಬರ್ ಅಲಿ ಅವರು ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಅವರಿಗೆ ಪತ್ರ ಬರೆದಿದ್ದು, ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಮನವಿ ಮಾಡಿದ್ದಾರೆ.
"ಸೂರ್ಯ ಅವರು ಚಾರಿಟಬಲ್ ಟ್ರಸ್ಟ್ ಮೂಲಕ ಮಾಡಿರುವ ಒಳ್ಳೆಯ ಕೆಲಸಗಳನ್ನು ಈ ಮೂಲಕ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗಿರುವುದನ್ನು ಪರಿಗಣಿಸಿ, ಸೂರ್ಯ ಅವರ ಹೇಳಿಕೆಯನ್ನು ಅರಿವಿನ ವ್ಯಾಪ್ತಿಗೆ ತೆಗೆದುಕೊಳ್ಳಬಾರದು ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೋವಿಡ್-19 ಕಾರಣದಿಂದಾಗಿ ಭಯದ ವಾತಾವರಣದಿಂದ ಕೋರ್ಟ್ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿವೆ. ಆದರೆ ವಿದ್ಯಾರ್ಥಿಗಳಿಗೆ ಎನ್ಇಇಟಿ ಪರೀಕ್ಷೆಯನ್ನು ಭಯವಿಲ್ಲದೇ ಬರೆಯುವುದಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆದೇಶಿಸಲಾಗಿದೆ ಎಂದು ಕೋರ್ಟ್ ಹೇಳಿರುವುದನ್ನು ಸೂರ್ಯ ಈ ರೀತಿಯಾಗಿ ಹೇಳಿದ್ದಾರೆ.
ಎನ್ಇಇಟಿ ಪರೀಕ್ಷೆಗೆ ಭಯಪಟ್ಟು ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಾವಿದರ ತೀವ್ರವಾದ ಭಾವನೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ನಿವೃತ್ತ ನ್ಯಾಯಾಧೀಶರು ಮುಖ್ಯನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.