ದೇಶ

ಲಾಕ್ ಡೌನ್ ಸಮಯದಲ್ಲಿ 1 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತವರು ರಾಜ್ಯಗಳಿಗೆ ಮರಳಿದ್ದಾರೆ: ಕೇಂದ್ರ

Vishwanath S

ನವದೆಹಲಿ: ಮಾಹಾಮಾರಿ ಕೊರೋನಾ ವೈರಸ್ ಪ್ರೇರಿತ ಲಾಕ್‌ಡೌನ್ 2020ರ ಮಾರ್ಚ್-ಜೂನ್ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲಾಕ್ ಡೌನ್ ನಿಂದಾಗಿ ದೇಶವೇ ಸ್ಥಬ್ಧಗೊಂಡಿದ್ದರಿಂದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ಕಾರಣವಾಗಿತ್ತು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ವಿಕೆ ಸಿಂಗ್ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಚಿವಾಲಯ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ ಕಾಲ್ನಡಿಗೆ ಸೇರಿದಂತೆ ತಮ್ಮ ರಾಜ್ಯಗಳಿಗೆ 1.06 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದರು ಎಂದು ಅವರು ಹೇಳಿದರು.

ತಾತ್ಕಾಲಿಕ ಲಭ್ಯವಿರುವ ಮಾಹಿತಿಯ ಪ್ರಕಾರ, 2020ರ ಮಾರ್ಚ್-ಜೂನ್ ಅವಧಿಯಲ್ಲಿ ರಸ್ತೆಗಳಲ್ಲಿ(ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ) 81,385 ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 29,415 ಸಾವು ನೋವುಗಳು ಸಂಭವಿಸಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.

ಲಾಕ್ ಡೌನ್ ಸಮಯದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ವಿಷಯದಲ್ಲಿ ಸಚಿವಾಲಯ ಪ್ರತ್ಯೇಕ ಡೇಟಾವನ್ನು ಸಂಗ್ರಹಿಸಿಲ್ಲ ಎಂದು ಅವರು ಹೇಳಿದರು.

ಗೃಹ ಸಚಿವಾಲಯವು(ಎಂಎಚ್‌ಎ) ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತವಾಗಿ ಸಲಹೆಗಳನ್ನು ನೀಡಿದ್ದು, ಆಶ್ರಯ, ಆಹಾರ, ನೀರು, ಆರೋಗ್ಯ ಸೌಲಭ್ಯಗಳು ಮತ್ತು ವಲಸೆ ಕಾರ್ಮಿಕರಿಗೆ ಸರಿಯಾದ ಸಮಾಲೋಚನೆ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದರು.

SCROLL FOR NEXT