ದೇಶ

ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ

Lingaraj Badiger

ನವದೆಹಲಿ: ಕೊರೋನಾ ವೈರಸ್ ನಿಂದ ಬುಧವಾರ ರಾತ್ರಿ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರ
ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಗುರುವಾರ ದೆಹಲಿಯಲ್ಲಿಯೇ ನಡೆಸಲಾಯಿತು.

ಇಂದು ಸಂಜೆ ದೆಹಲಿಯ ದ್ವಾರಕಾ ಸೆಕ್ಟರ್ 24ರಲ್ಲಿರುವ ಲಿಂಗಾಯತರ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿಧಿ ವಿಧಾನಗಳೊಂದಿಗೆ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ನೆರವೇರಿತು.

ಸುರೇಶ್ ಅಂಗಡಿ ಅವರು ಕೊರೋನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕೋವಿಡ್-19 ಶಿಷ್ಟಾಚಾರದ ಪ್ರಕಾರವೇ ಅವರನ್ನು ಮಣ್ಣು ಮಾಡಲಾಯಿತು. ರುದ್ರಭೂಮಿಗೆ ಕೆಲವೇ ಕೆಲವು ಜನರಿಗೆ ಪ್ರವೇಶಾವಕಾಶ ನೀಡಲಾಗಿತ್ತು. ಕುಟುಂಬ ವರ್ಗದವರು ಪಿಪಿಇ ಕಿಟ್ ಹಾಕಿಕೊಂಡೆ ಪೂಜಾ ವಿಧಾನಗಳನ್ನು ಪೂರೈಸಿದರು. ಬಾಳಯ್ಯ ಹೀರೇಮಠ್ ಮತ್ತು ಶ್ರೀಕಾಂತ್ ಚೌಕಿಮಠ್ ಇತರೆ ವಿಧಿ ವಿಧಾನಗಳನ್ನು ಪೂರೈಸಿದರು. ಇದೇ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ ಕುಶಾಲ ತೋಪು ಹಾರಿಸಿ ಅಗಲಿದ ಸುರೇಶ್ ಅಂಗಡಿ ಅವರಿಗೆ ಸರ್ಕಾರಿ ಗೌರವ ಸಲ್ಲಿಸಿದರು.

ಸುರೇಶ್ ಅಂಗಡಿಯವರ ಪತ್ನಿ ಮಂಗಳಾ, ಅವರ ಇಬ್ಬರು ಪುತ್ರಿಯರು, ಸಚಿವ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಸಂಸದರಾದ ಈರಣ್ಣ ಕಡಾಡಿ, ಅಣ್ಣಸಾಹೇಬ್ ಜೊಲ್ಲೆ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 

ಅಂಗಡಿ ಅವರ ಕುಟುಂಬ ಸದಸ್ಯರು ಮೃತದೇಹವನ್ನು ಅವರ ಸ್ವಂತ ಊರಾದ ಬೆಳಗಾವಿಗೆ ತರುವ ಪ್ರಯತ್ನ ನಡೆಸಿದರಾದರೂ, ಕೋವಿಡ್‌ -19 ಸಂಬಂಧಿತ ಸಾವಿನ ಪ್ರಕರಣಗಳಲ್ಲಿ ಮೃತದೇಹವನ್ನು ಸ್ಥಳಾಂತರಿಸಲು ಮಾರ್ಗಸೂಚಿ ಅನುಮತಿ ನೀಡುವುದಿಲ್ಲವಾದ್ದರಿಂದ, ಈ ಅವಕಾಶ ನಿರಾಕರಿಸಲಾಯಿತು.

SCROLL FOR NEXT