ಮುಂಬೈ: ಮುಂಬಯಿಯ ಪ್ರತಿಷ್ಠಿತ ಸ್ಟಾರ್ ಹೋಟೆಲ್ನಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಸುಮಾರು ಎರಡೂ ಗಂಟೆಗೂ ನಡೆದ ಈ ಚರ್ಚೆ, ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಏನೋ ದೊಡ್ಡ ಬಲದಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕಳೆದ ವಿಧಾನಸಭೆ ಚುನಾವಣೆ ಬಳಿಕ ಪರಸ್ಪರ ದೂರವಾಗಿದ್ದ ಬಿಜೆಪಿ-ಶಿವಸೇನೆ ಇದೀಗ ಈ ನಾಯಕರ ಸಭೆಯ ನೆಪದಲ್ಲಿ ಮತ್ತೆ ಒಂದಾಗಲಿವೆಯೇ ಎಂಬ ಅನುಮಾನ ಹಲವರಲ್ಲಿ ಮೂಡಿದೆ.
ಇನ್ನು ದೇವೇಂದ್ರ ಫಡ್ನವೀಸ್ ಹಾಗೂ ಸಂಜಯ್ ರಾವತ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಘಟಕ, ಇದೊಂದು ಖಾಸಗಿ ಭೇಟಿ ಎಂದಷ್ಟೇ ಹೇಳಿದೆ.
ತನ್ನ ಮುಖವಾಣಿ ಸಾಮ್ನಾಗೆ ಸಂದರ್ಶನ ನೀಡುವಂತೆ ಶಿವಸೇನೆ ದೇವೇಂದ್ರ ಫಡ್ನವೀಸ್ ಅವರನ್ನು ಕೋರಿದೆ. ಅದರಂತೆ ಸಂದರ್ಶನದ ರೂಪುರೇಷೆ ಕುರಿತು ಚರ್ಚಿಸಲು ಇಬ್ಬರೂ ನಾಯಕರು ಭೇಟಿಯಾಗಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಈ ಕುರಿತು ಮಾತನಾಡಿರುವ ಬಿಜೆಪ ವಕ್ತಾರ ಕೇಶವ್ ಉಪಾಧ್ಯೆ, ಬಿಹಾರ ಚುನಾವಣೆ ಬಳಿಕ ದೇವೇಂದ್ರ ಫಡ್ನವೀಸ್ ಸಾಮ್ನಾಗೆ ಸಂದರ್ಶನ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂದರ್ಶನದ ಸಿದ್ಧತೆ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.