ಕೊಲ್ಕತ್ತಾ: ಕೇಂದ್ರಿಯ ಪಡೆ ವಿರುದ್ಧ ಹೇಳಿಕೆ ಆರೋಪದ ಮೇರೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ಮತ್ತೊಂದು ನೋಟಿಸ್ ನೀಡಿದೆ.
ಮಾರ್ಚ್ 28 ಮತ್ತು ಏಪ್ರಿಲ್ 7 ರಂದು ಸಿಆರ್ ಪಿಎಫ್ ಭದ್ರತಾ ಪಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ಮತದಾರರನ್ನು ಬೆದರಿಸುತ್ತಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಏಪ್ರಿಲ್ 10ರೊಳಗೆ ವಿವರಣೆ ನೀಡುವಂತೆ ಆಯೋಗ ತಿಳಿಸಿದೆ. ಇದು ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ನೀಡಿರುವ ಎರಡನೇ ನೋಟಿಸ್ ಆಗಿದೆ.
ಈ ಹಿಂದೆ, ಒಂದು ಸಮುದಾಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಬುಧವಾರ ನೋಟಿಸ್ ನೀಡಿತ್ತು. ಹೂಗ್ಲಿಯಲ್ಲಿ ಚುನಾವಣಾ ಪ್ರಚಾರ ನಡೆಸುವಾಗ, ಮುಸ್ಲಿಂ ಸಮುದಾಯದ ಮತಗಳು ಬೇರೆ ಪಕ್ಷಗಳ ನಡುವೆ ವಿಭಜನೆಗೆ ಅವಕಾಶ ನೀಡದಂತೆ ಮತದಾರರಲ್ಲಿ ಅವರು ಮನವಿ ಮಾಡಿಕೊಂಡ ಆರೋಪದ ಮೇರೆಗೆ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿತ್ತು.