ದೇಶ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸಿ-  ಮೋದಿಗೆ ಕಪಿಲ್ ಸಿಬಲ್ ಒತ್ತಾಯ

Nagaraja AB

ನವದೆಹಲಿ: ದೇಶದಲ್ಲಿ ಕೊರೋನ ಸೋಂಕು ಬಹಳ  ವೇಗವಾಗಿ ಹಬ್ಬುತ್ತಿರುವ  ಕಾರಣ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸಬೇಕೆಂದು  ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ  ಕಪಿಲ್ ಸಿಬಲ್  ಪ್ರಧಾನಿ ನರೇಂದ್ರ ಮೋದಿ ಅವರನ್ನು  ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ರ‍್ಯಾಲಿ ನಿಷೇಧಿಸುವಂತೆಯೂ ಅವರು  ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. 

ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳು, ಚೇತರಿಕೆಗಿಂತಲೂ ಹೆಚ್ಚಾಗುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸಬೇಕು. ಚೇತರಿಕೆಗಿಂತ ವೇಗವಾಗಿ ಸೋಂಕುಗಳು ಹರಡುತ್ತಿವೆ ಇದರ ಜೊತೆಗೆ  ಚುನಾವಣಾ ಆಯೋಗವು ಚುನಾವಣಾ  ರ‍್ಯಾಲಿ  ನಿರ್ಬಂಧಿಸಬೇಕು. ನ್ಯಾಯಾಲಯಗಳು ಜನರ ಜೀವನ ಕಾಪಾಡಬೇಕು ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,61,500 ಸೋಂಕು ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ,. ಸಕ್ರಿಯ ಪ್ರಕರಣಗಳ ಸಂಖ್ಯೆ 18 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. ಕಳೆದ ನಾಲ್ಕು ದಿನಗಳಿಂದಲೂ ದೇಶದಲ್ಲಿ ಸತತವಾಗಿ 2 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ.

SCROLL FOR NEXT