ಲಖನೌ: ರಾಜ್ಯಗಳಿಗೆ ಕೋವಿಶೀಲ್ಡ್ ಬೆಲೆ ಹೆಚ್ಚಿಸಿದ್ದರಿಂದ ತೀವ್ರ ಆಕ್ರೋಶಗೊಂಡ ಉತ್ತರ ಪ್ರದೇಶ ಬಿಜೆಪಿ ಶಾಸಕರೊಬ್ಬರು, ಕೋವಿಡ್ ಲಸಿಕೆ ತಯಾರಕ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ)ದ ಸಿಇಒ ಆಧಾರ್ ಪೂನಾವಾಲಾ ಅವರನ್ನು 'ಡಕಾಯಿತ' ಎಂದು ಕರೆದಿದ್ದಾರೆ. ಅಲ್ಲದೆ ಆ ಕಂಪನಿಯನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ "ಸ್ವಾಧೀನಪಡಿಸಿಕೊಳ್ಳುವಂತೆ" ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಸರಬರಾಜಿಗೆ ಪ್ರತಿ ಡೋಸ್ಗೆ 600 ರೂ. ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ಗೆ 400 ರೂ. ಎಂದು ಎಸ್ಐಐ ಬುಧವಾರ ಘೋಷಿಸಿದ ನಂತರ ಗೋರಖ್ಪುರ ಶಾಸಕ ರಾಧಾ ಮೋಹನ್ ದಾಸ್ ಅಗ್ರವಾಲ್ ಈ ಹೇಳಿಕೆ ನೀಡಿದ್ದಾರೆ.
ಆಧಾರ್ ಪೂನಾವಾಲಾ ನೀವು ಡಕಾಯಿತರಿಗಿಂತ ಕೆಟ್ಟವರು. ಸಾಂಕ್ರಾಮಿಕ ಕಾಯ್ದೆಯಡಿ ನಿಮ್ಮ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಕಚೇರಿ, ಅಮಿತ್ ಶಾ, ಬಿಎಲ್ ಸಂತೋಷ್, ಹರ್ಷವರ್ಧನ್ ಅವರನ್ನು ಟ್ಯಾಗ್ ಮಾಡಿ ಬಿಜೆಪಿ ಶಾಸಕ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ಗಳಲ್ಲಿ, ಕೃಷಿ ವೆಚ್ಚಗಳು ಮತ್ತು ಬೆಲೆಗಳಿಗಾಗಿ ಸ್ವಾಮಿನಾಥನ್ ಆಯೋಗದ ಸೂತ್ರವನ್ನು ಅಗ್ರವಾಲ್ ಉಲ್ಲೇಖಿಸಿದ್ದಾರೆ.