ದೇಶ

ಕೋವಿಡ್ ಸ್ಥಿತಿ 'ರಾಷ್ಟ್ರೀಯ ತುರ್ತು ಪರಿಸ್ಥಿತಿ' ಎಂದ ಸುಪ್ರೀಂ ಕೋರ್ಟ್, ಉಚಿತ ಆಕ್ಸಿಜನ್ ಪೂರೈಕೆಯ ವೇದಾಂತ ಅರ್ಜಿ ವಿಚಾರಣೆಗೆ ಅಸ್ತು

Lingaraj Badiger

ನವದೆಹಲಿ: ಕೋವಿಡ್ -19 ಸ್ಥಿತಿಯನ್ನು ಬಹುತೇಕ "ರಾಷ್ಟ್ರೀಯ ತುರ್ತು ಪರಿಸ್ಥಿತಿ" ಎಂದಿರುವ ಸುಪ್ರೀಂ ಕೋರ್ಟ್, ನಿತ್ಯ ಒಂದು ಸಾವಿರ ಟನ್ ಆಮ್ಲಜನಕವನ್ನು ಉತ್ಪಾದಿಸಿ, ಅದನ್ನು ಉಚಿತವಾಗಿ ಪೂರೈಕೆ ಮಾಡಲು ಮುಂದೆ ಬಂದಿರುವ ಬಂದ್ ಆಗಿರುವ ತಮಿಳುನಾಡಿನ ತೂತುಕುಡಿಯಲ್ಲಿರುವ ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕದ ಅರ್ಜಿ ವಿಚಾರಣೆ ಮಾಡಲು ಒಪ್ಪಿದೆ.

ಈ ಹಿಂದೆ ತಮಿಳುನಾಡು ಸರ್ಕಾರದ ವಿರೋಧದ ಹಿನ್ನೆಲೆಯಲ್ಲಿ ಸ್ಟೆರ್ಲೈಟ್ ತಾಮ್ರ ಘಟಕ ಪುನರರಾಂಭಿಸಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿತ್ತು. ಈಗ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠ ವೇದಾಂತ ಅರ್ಜಿ ವಿಚಾರಣೆಗೆ ಸ್ಪೀಕರಿಸಿದೆ.

"ನಾವು ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇವೆ. ನಾವು ಎಲ್ಲಾ ಪರಿಸರ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ಘಟಕದಲ್ಲಿ ಆಕ್ಸಿಜನ್ ಪ್ಲಾಂಟ್ ಇದ್ದು, ಅದು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು" ಎಂದು ವೇದಾಂತ ಮನವಿ ಸಲ್ಲಿಸಿದೆ.

"ದೇಶದಲ್ಲಿ ಬಹುತೇಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಇದೆ ಮತ್ತು ನಾಳೆ ನಾವು ಅದನ್ನು ವಿಚಾರಣೆ(ವೇದಾಂತದ ಮನವಿ)" ಮಾಡುತ್ತೇವೆ ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ ನ್ಯಾಯಪೀಠ ತಿಳಿಸಿದೆ.

"ದೇಶಕ್ಕೆ ಆಮ್ಲಜನಕದ ಅವಶ್ಯಕತೆಯಿದೆ ಮತ್ತು ಕೇಂದ್ರ ಯಾವುದೇ ಮೂಲದಿಂದಲೂ ಆಮ್ಲಜನಕವನ್ನು ಹೆಚ್ಚಿಸಲು ಮುಂದಾಗಿದೆ. ವೇದಾಂತ ತನ್ನ ಸ್ಥಾವರವನ್ನು ಕಾರ್ಯರೂಪಕ್ಕೆ ತರಲು ಬಯಸಿದೆ, ಆದರೆ ವೇದಾಂತ ಆರೋಗ್ಯ ಉದ್ದೇಶಗಳಿಗಾಗಿ ಆಮ್ಲಜನಕವನ್ನು ತಯಾರಿಸಲು ಮಾತ್ರ ಕಾರ್ಯರೂಪಕ್ಕೆ ಬರಲಿ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್ ಗೆ ತಿಳಿಸಿದ್ದಾರೆ. 

"ಪರಿಸರವನ್ನು ರಕ್ಷಿಸುವ ಮತ್ತು ಮಾನವ ಜೀವವನ್ನು ರಕ್ಷಿಸುವ ಎರಡು ಆಯ್ಕೆಗಳಲ್ಲಿ ನಾವು ಮಾನವ ಜೀವವನ್ನು ರಕ್ಷಿಸುವ ಪರವಾಗಿ ಒಲವು ತೋರಬೇಕು" ಎಂದು ಮೆಹ್ತಾ ಹೇಳಿದ್ದಾರೆ.

ವೇದಾಂತ ಪರ ವಕೀಲ ಹರೀಶ್ ಸಾಳ್ವೆ ಅವರು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು. ಆಕ್ಸಿಜನ್ ಇಲ್ಲದೆ ಜನ ಪ್ರತಿದಿನವೂ ಸಾಯುತ್ತಿದ್ದಾರೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಟನ್ ಗಟ್ಟಲೇ ಆಮ್ಲಜನಕವನ್ನು ಉತ್ಪಾದಿಸಿ, ಅದನ್ನು ಉಚಿತವಾಗಿ ಪೂರೈಸಲು ಸಿದ್ಧ ಎಂದು ಹೇಳಿದರು.

SCROLL FOR NEXT