ದೇಶ

ರಾಷ್ಟ್ರೀಯ ಬಿಕ್ಕಟ್ಟಿನ ವಿಚಾರದಲ್ಲಿ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Srinivasamurthy VN

ನವದೆಹಲಿ: ಕೋವಿಡ್-19 ನಂತಹ ರಾಷ್ಟ್ರೀಯ ಬಿಕ್ಕಟ್ಟಿನ ವಿಚಾರದಲ್ಲಿ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸಂಬಂಧ ದಾಖಲಾಗಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್‌, ನ್ಯಾ.ಎಲ್.ಎನ್.ರಾವ್ ಮತ್ತು ನ್ಯಾ.ರವೀಂದ್ರ ಎಸ್ ಭಟ್ ನೇತೃತ್ವದ ತ್ರಿಸದಸ್ಯ ಪೀಠ, 'ಸುಪ್ರೀಂ ಕೋರ್ಟ್ ವ್ಯವಹರಿಸಬೇಕಾದ ಕೆಲವು ರಾಷ್ಟ್ರೀಯ ಸಮಸ್ಯೆಗಳಿವೆ. ಆದರೆ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ಅಂತೆಯೇ ಹೈಕೋರ್ಟ್‌ಗಳು ವಿವಿಧ ರಾಜ್ಯಗಳಲ್ಲಿನ ಅರ್ಜಿಗಳನ್ನು ಆಲಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿಲ್ಲ ಪೀಠ ಸ್ಪಷ್ಟಪಡಿಸಿದೆ.

ಅಂತೆಯೇ, 'ನಾವು ಹೈಕೋರ್ಟ್‌ಗಳನ್ನು ವಿಚಾರಣೆಯಿಂದ ತಡೆಯುತ್ತಿಲ್ಲ. ನಾವು ಪೂರಕ ಪಾತ್ರವನ್ನು ವಹಿಸುತ್ತಿದ್ದೇವೆ. ಈ ಸಾಂಕ್ರಾಮಿಕ ಸಂದರ್ಭದಲ್ಲಿ ತನ್ನ ವ್ಯಾಪ್ತಿಯಲ್ಲಿನ ಪ್ರಕರಣಗಳನ್ನು ನಿರ್ವಹಿಸುವ ಕಾರ್ಯಕ್ಷಮತೆ ಇದೆ. ಮತ್ತು ಕೆಲ ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯದ ಮಧ್ಯ ಪ್ರವೇಶದ ಅಗತ್ಯತೆ ಕೂಡ ಇದೆ. ಪ್ರಾದೇಶಿಕ ಮಿತಿಗಳಿಂದಾಗಿ ಸಮಸ್ಯೆಗಳನ್ನು ಎದುರಿಸಲು ಹೈಕೋರ್ಟ್‌ಗಳಿಗೆ ಯಾವುದೇ ತೊಂದರೆ ಇದ್ದರೆ, ನಾವು ಸಹಾಯ ಮಾಡುತ್ತೇವೆ ಎಂದು ಪೀಠ ಭರವಸೆ ನೀಡಿದೆ.

ಇನ್ನು ಕೋವಿಡ್ ಬಿಕ್ಕಟ್ಟಿನಲ್ಲಿ ಆಮ್ಲಜನಕ, ಔಷಧಿಗಳು, ಲಸಿಕೆಗಳು ಮತ್ತು ಇತರ ಸರಬರಾಜುಗಳ ಕುರಿತಂತೆ ದೇಶದ ವಿವಿಧ ಸುಪ್ರೀಂ ಕೋರ್ಟ್ ನಲ್ಲಿ ಸಾಕಷ್ಟು ಅರ್ಜಿಗಳು ದಾಖಲಾಗಿವೆ. ಇಂತಹುದೇ ಅರ್ಜಿಗಳು ವಿವಿಧ ಹೈಕೋರ್ಟ್ ಗಳಲ್ಲೂ ದಾಖಲಾಗುತ್ತಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಅಲ್ಲದೆ ಆಕ್ಸಿಜನ್, ಔಷಧಿಗಳು ಸೇರಿದಂತೆ ಅಗತ್ಯ ಪರಿಕರಗಳ ಸುಗಮ ಸರಬರಾಜು ಸಮಸ್ಯೆ ನೀಗಿಸಲು ರಾಷ್ಟ್ರೀಯ ಯೋಜನೆ ರೂಪಿಸಿ ಎಂದು ಸೂಚಿಸಿತ್ತು.

ಆದರೆ ನಿವೃತ್ತ ನ್ಯಾಯಮೂರ್ತಿ ಎಸ್ ಎ ಬಾಬ್ಡೇ ನೇತೃತ್ವದ ಸುಪ್ರೀಂ ಕೋರ್ಟ್ ನ ಈ ನಡೆಯನ್ನು ಕೆಲ ಹಿರಿಯ ವಕೀಲರು ಟೀಕಿಸಿದ್ದರು. ಈ ಸಂಬಂಧ ಇಂದು ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ಪ್ರಕರಣಗಳನ್ನು ಹೈಜಾಕ್ ಮಾಡುವುದು ಇದರ ಉದ್ದೇಶವಲ್ಲ. ಆದರೆ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ತಾನು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಹೇಳಿದೆ. 

SCROLL FOR NEXT