ನವದೆಹಲಿ: ಕೇಂದ್ರ ಸರ್ಕಾರ ರೆಮ್ಡಿಸಿವಿರ್ ನ ಬಳಕೆಯಲ್ಲಿ ಪಾಲಿಸಬೇಕಾದ ಹೊಸ ಪ್ರೊಟೋಕಾಲ್ ನ್ನು ಬಿಡುಗಡೆ ಮಾಡಿದ್ದರ ಬಗ್ಗೆ ದೆಹಲಿ ಹೈಕೋರ್ಟ್ ಕೆಂಡಾಮಂಡಲಗೊಂಡಿದೆ.
"ಕೇಂದ್ರ ಸರ್ಕಾರ ಜನರ ಸಾವನ್ನು ಬಯಸುತ್ತಿರುವಂತಿದೆ" ಎಂದು ದೆಹಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರೆಮ್ಡಿಸಿವಿರ್ ನ್ನು ಆಕ್ಸಿಜನ್ ಸಪೋರ್ಟ್ ನಲ್ಲಿರುವ ರೋಗಿಗಳಿಗೆ ಮಾತ್ರವೇ ನೀಡಬೇಕೆಂಬ ನಿಯಮವನ್ನು ಕೇಂದ್ರ ಜಾರಿಗೊಳಿಸಿದೆ.
ಕೋವಿಡ್-19 ನಿಂದ ಬಳಲುತ್ತಿರುವ ವಕೀಲರೊಬ್ಬರು ತಮಗೆ 6 ಡೋಸ್ ಗಳ ರೆಮ್ಡಿಸಿವಿರ್ ಬದಲಾಗಿ 3 ಡೋಸ್ ಅಷ್ಟೇ ಸಿಕ್ಕಿದ್ದು ಎಂದು ಕೇಂದ್ರದ ಹೊಸ ನಿಯಮದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ನಿಯಮ ತಪ್ಪು, ಬುದ್ಧಿಯನ್ನು ಉಪಯೋಗಿಸದೇ ತೆಗೆದುಕೊಂಡ ನಿರ್ಧಾರವಾಗಿದೆ. ಆಕ್ಸಿಜನ್ ಇಲ್ಲದವರಿಗೆ ಇತ್ತ ರೆಮ್ಡಿಸಿವಿರ್ ಕೂಡ ಸಿಗುವುದಿಲ್ಲ. ಕೇಂದ್ರ ಸರ್ಕಾರ ಜನರ ಸಾವನ್ನು ಬಯಸುತ್ತಿರುವಂತಿದೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ರೆಮ್ಡಿಸಿವಿರ್ ದಾಸ್ತಾನು ಕೊರತೆಯನ್ನು ಕಡಿಮೆ ಮಾಡುವುದಕ್ಕೆ ನಿಯಮಗಳನ್ನು ಬದಲಾವಣೆ ಮಾಡಿರುವಂತೆ ಕಾಣುತ್ತಿದೆ ಎಂದು ಕೋರ್ಟ್ ಹೇಳಿದ್ದು, ಇದು ಸಂಪೂರ್ಣ ಕೆಟ್ಟ ನಿರ್ವಹಣೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.