ದೇಶ

ಚೆನ್ನೈ: ಡಾ.ಸುಬ್ಬಯ್ಯ ಕೊಲೆ ಪ್ರಕರಣದ 7 ಅಪರಾಧಿಗಳಿಗೆ ಗಲ್ಲು ಶಿಕ್ಷೆ

Lingaraj Badiger

ಚೆನ್ನೈ: 2013 ರ ಸೆಪ್ಟೆಂಬರ್ 14 ರಂದು ಚೆನ್ನೈನ ಆರ್‌ಎ ಪುರಂನ ಬಿಲ್‌ರೋತ್ ಆಸ್ಪತ್ರೆಗಳ ಹೊರಗೆ ನರರೋಗ ತಜ್ಞ ಡಾ ಎಸ್‌ಡಿ ಸುಬ್ಬಯ್ಯ ಅವರನ್ನು ಕೊಲೆ ಮಾಡಿದ ಏಳು ಜನರಿಗೆ ನಗರದ ವಿಚಾರಣಾ ನ್ಯಾಯಾಲಯ ಬುಧವಾರ ಗಲ್ಲು ಶಿಕ್ಷೆ ವಿಧಿಸಿದೆ. ಅಲ್ಲದೆ ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ವಿಚಾರಣೆಯ ಸಮಯದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯಾದ ಒಬ್ಬ ಆರೋಪಿಯನ್ನು ಕೋರ್ಟ್ ಆರೋಪ ಮುಕ್ತಗೊಳಿಸಿದೆ.

ಡಾ. ಸುಬ್ಬಯ್ಯ ಅವರನ್ನು ಕನ್ಯಾಕುಮಾರಿ ಜಿಲ್ಲೆಯ ಅಂಜುಗ್ರಾಮಂ ಎಂಬ ತನ್ನ ಸ್ವಗ್ರಾಮದಲ್ಲಿ 2.4 ಎಕರೆ ಆಸ್ತಿ ವಿವಾದದಿಂದಾಗಿ ಕೊಲೆ ಮಾಡಲಾಗಿತ್ತು.

ಆರ್‌ಎ ಪುರಂ ಆಸ್ಪತ್ರೆಯ ಹೊರಗೆ ಮೂವರು ವ್ಯಕ್ತಿಗಳು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು ಮತ್ತು ಒಂಬತ್ತು ದಿನಗಳ ನಂತರ ಸಾವನ್ನಪ್ಪಿದರು. ಭೀಕರ ದಾಳಿಯ ಚಿತ್ರಗಳು ಹತ್ತಿರದ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದವು. 

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ವಿಜಯರಾಜ್ ತನ್ನ ಅಂತಿಮ ವಾದದಲ್ಲಿ ಎಲ್ಲಾ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಮತ್ತು ವೈದ್ಯರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ವಾದಿಸಿದ್ದರು. ಅಲ್ಲದೆ ಪ್ರಕರಣದ ಎಲ್ಲ ಆರೋಪಿಗಳಿಗೂ ಮರಣದಂಡನೆ ವಿಧಿಸಬೇಕು ಎಂದು ಮನವಿ ಮಾಡಿದ್ದರು.

ವಾದ, ಪ್ರತಿವಾದ ಆಲಿಸಿದ ಸೆಷನ್ಸ್ ಕೋರ್ಟ್, ಪೊನ್ನುಸ್ವಾಮಿ, ತುಳಸಿ, ಬೋರಿಸ್, ವಿಲಿಯಂ, ಜೇಮ್ಸ್ ಸತೀಶ್ ಕುಮಾರ್, ಮುರುಗನ್ ಮತ್ತು ಸೆಲ್ವ ಪ್ರಕಾಶ್ ಅವರಿಗೆ ಐಪಿಸಿ ಸೆಕ್ಷನ್ 302 ಮತ್ತು 120ಬಿ ಅಡಿಯಲ್ಲಿ ಗಲ್ಲು ವಿಧಿಸಿ, ತಿರ್ಪು ನೀಡಿದ್ದಾರೆ.

SCROLL FOR NEXT