ದೇಶ

ಪ್ಲಾಸ್ಟಿಕ್​ ಧ್ವಜ ಬಳಕೆಯಾಗದಂತೆ ನಿಗಾ ವಹಿಸಿ; ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

Manjula VN

ನವದೆಹಲಿ: ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಬಳಕೆಯಾಗದಂತೆ ನಿಗಾವಹಿಸಿ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. 

ರಾಷ್ಟ್ರಧ್ವಜ ಅತ್ಯಂತ ಗೌರವಯುತವಾದ ವಿಚಾರ. ಅದು ದೇಶದ ಜನರ ಭರವಸೆ, ಆಕಾಂಕ್ಷೆ‌ಗಳನ್ನು ಪ್ರತಿನಿಧಿ‌ಸುತ್ತದೆ. ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ‌ರು ಮತ್ತು ಸರ್ಕಾರದ ಸಂಸ್ಥೆಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಕುರಿತು ಇರುವ ಕಾನೂನು, ಆಚರಣೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಅರಿವಿನ ಕೊರತೆ ಇದೆ. ಪ್ಲಾಸ್ಟಿಕ್‌ನ ಧ್ವಜಗಳು ಕಾಗದದ ಧ್ವಜಗಳಂತೆ ಜೈವಿಕವಾಗಿ ವಿಘಟನೆಯಾಗುವುದಿಲ್ಲ. ಇವು ದೀರ್ಘಕಾಲದವರೆಗೂ ಕೊಳೆಯುವುದಿಲ್ಲ. ಹಾಗಾಗಿ, ಜೈವಿಕ ಪರಿಸರಕ್ಕೆ ಹಾನಿಯಾಗದ ತ್ರಿವರ್ಣ ಧ್ವಜಗಳನ್ನು ಬಳಕೆ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. 

ಪ್ಲಾಸ್ಟಿಕ್ ವಿಲೇವಾರಿ ದೇಶದ ಬಹುದೊಡ್ಡ ಸವಾಲುಗಳಲ್ಲಿ ಒಂದು. ಆದ್ದರಿಂದ ಪ್ರಮುಖ ರಾಷ್ಟ್ರೀಯ, ಕ್ರೀಡಾ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಜೈವಿಕ ವಿಘಟನೆಗೆ ಪೂರಕವಾಗಿ ಕಾಗದದ ಧ್ವಜಗಳನ್ನು ಬಳಕೆ ಮಾಡುವಂತೆ ಭಾರತೀಯ ಧ್ವಜ ಸಂಹಿತೆ -2002 ಮತ್ತು ನಿಬಂಧನೆಗಳು ತಿಳಿಸುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡದಂತೆ ದೇಶವಾಸಿಗಳಿಗೆ ಮನವಿ ಮಾಡಿದೆ.

SCROLL FOR NEXT