ನವದೆಹಲಿ: ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಭಾರತದಿಂದ ಬರುವ ವಿಮಾನಗಳನ್ನು ಮುಂದಿನ ಸೆಪ್ಟೆಂಬರ್ ಅಂತ್ಯದವರೆಗೆ ಕೆನಡಾ ಸರ್ಕಾರ ನಿ಼ಷೇಧ ಮಾಡಿ ಆದೇಶ ಹೊರಡಿಸಿದೆ.
ಕೋವಿಡ್ ಸೋಂಕು ದೇಶದಲ್ಲಿ ಮತ್ತಷ್ಟು ಹೆಚ್ಚಾಗಬಹುದು ಆತಂಕದಿಂದಲೇ ಭಾರತದಿಂದ ಬರುವ ನೇರ ವಿಮಾನಗಳ ಸಂಚಾರವನ್ನು ಸರ್ಕಾರ ನಿಷೇಧಿಸಿದೆ. ಕೆನಡಾ ಸರ್ಕಾರದ ಆರೋಗ್ಯ ಇಲಾಖೆ ವರದಿ ಮತ್ತು ಮುನ್ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ವಿಮಾನ ಸಂಚಾರಗಳ ಮೇಲೆ ನಿರ್ಬಂಧ ಹಾಕಿದೆ.
ಕಳೆದ ಏಪ್ರಿಲ್ 22ರಂದು ಕೆನಡಾ ಸರ್ಕಾರ ಮೊದಲ ಬಾರಿಗೆ ಭಾರತೀಯ ವಿಮಾನಗಳು ದೇಶ ಪ್ರವೇಶ ಮಾಡದಂತೆ ನಿರ್ಬಂಧ ಹಾಕಿದ್ದು. ಈಗ 5ನೇ ಬಾರಿಗೆ ಭಾರತೀಯ ವಿಮಾನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಹೊಸ ಆದೇಶ ಸೆಪ್ಟೆಂಬರ್ 21 ರವರೆಗೂ ಜಾರಿಯಲ್ಲಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಸ್ಪಷ್ಟಪಡಿಸಿದ್ದಾರೆ. ಹಿಂದಿನ ಆದೇಶ ಆಗಸ್ಟ್ 21ಕ್ಕೆ ಮುಕ್ತಾಯಗೊಂಡಿದ್ದರೂ ಅದನ್ನು ಒಂದು ತಿಂಗಳ ಮಟ್ಟಿಗೆ ವಿಸ್ತರಣೆ ಮಾಡಿ ಸರ್ಕಾರ ಹೊಸ ತೀರ್ಮಾನ ಕೈಗೊಂಡಿದೆ.