ದೇಶ

ಉತ್ತರ ಪ್ರದೇಶದಲ್ಲಿ ಮೊಹರಮ್ ಮೆರವಣಿಗೆಗೆ ನಿರ್ಬಂಧ; ಆದರೆ ತಾಜಿಯಾಗೆ ಅನುಮತಿ

Srinivas Rao BV

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆ ಮೊಹರಮ್ ಮೆರವಣಿಗೆಗೆ ನಿರ್ಬಂಧ ವಿಧಿಸಿದೆ. ಆದರೆ ಮನೆಗಳಲ್ಲಿ ತಾಜಿಯಾ ಹಾಗೂ ಮಜ್ಲಿಸ್ ಆಚರಣೆಗೆ ಅನುಮತಿ ನೀಡಿದೆ. 

ಕೋವಿಡ್-19 ಅಂಗವಾಗಿ ಮೊಹರಮ್ ಅಂಗವಾಗಿ ನಡೆಯುವ ಯಾವುದೇ ಧಾರ್ಮಿಕ ಮೆರವಣಿಗೆಗಳಿಗೆ ಅನುಮತಿ ನೀಡದಂತೆ ಆದಿತ್ಯನಾಥ್ ಸರ್ಕಾರ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ತಿ ಈ ಆದೇಶದ ಬಗ್ಗೆ ಮಾಹಿತಿ ನೀಡಿದ್ದು, "ಗರಿಷ್ಠ 50 ಮಂದಿ ಭಾಗವಹಿಸುವ ಮೂಲಕ ಮನೆಗಳಲ್ಲಿ ತಾಜಿಯಾ, ಮಜ್ಲಿಸ್ ಆಚರಣೆಗಳಿಗೆ ಅನುಮತಿ ನೀಡಲಾಗಿದೆ" ಎಂದಿದ್ದಾರೆ. 

ಧಾರ್ಮಿಕ ಮುಖಂಡರೊಂದಿಗೆ ಮಾತನಾಡಿ, ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಕಂಟೈನ್ಮೆಂಟ್ ಜೋನ್ ಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಲಾಗುತ್ತಿದೆ. 

ಭಯೋತ್ಪಾದಕರು ಜನಸಾಮಾನ್ಯರನ್ನು ಟಾರ್ಗೆಟ್ ಮಾಡುವುದು, ಕೋಮು ಸೌಹಾರ್ದ ಕದಡುವುದಕ್ಕೆ ಯತ್ನಿಸುವ ಸಮಾಜಘಾತುಕ ಶಕ್ತಿಗಳ ಮೇಲೆ ವಿಶೇಷ ಗಮನ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆಯೂ ಉತ್ತರ ಪ್ರದೇಶ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು ಆಕ್ಷೇಪಾರ್ಹ ಪೋಸ್ಟ್ ಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. 

ಶ್ರಾವಣ ಮಾಸದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗಳ ನಡುವೆಯೇ ಮೊಹರಂ ಬಂದಿರುವುದರಿಂದ ವಿಶೇಷ ಜಾಗರೂಕತೆ ವಹಿಸಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. 

SCROLL FOR NEXT