ದೇಶ

ಅಫ್ಘನ್ ನಲ್ಲಿ ಪರಿಸ್ಥಿತಿ ಉದ್ವಿಗ್ನ: ರಾಯಭಾರಿ ಸೇರಿದಂತೆ 120 ಭಾರತೀಯರ ಹೊತ್ತ ವಿಮಾನ ಕಾಬುಲ್ ನಿಂದ ಪ್ರಯಾಣ!

Sumana Upadhyaya

ನವದೆಹಲಿ: ತಾಲಿಬಾನ್ ಉಗ್ರಗಾಮಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಪಡಿಸಿಕೊಂಡ ನಂತರ ಅಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಮತ್ತು ಇತರ ಅಧಿಕಾರಿಗಳನ್ನು ಭಾರತೀಯ ವಾಯುಪಡೆಯ ವಿಮಾನದಲ್ಲಿ ತುರ್ತಾಗಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದನ್ ಬಗ್ಚಿ, ಕಾಬುಲ್ ನಲ್ಲಿರುವ ಭಾರತೀಯ ರಾಯಭಾರಿ ಮತ್ತು ಅವರ ಸಿಬ್ಬಂದಿಗಳನ್ನು ತಕ್ಷಣವೇ ಭಾರತಕ್ಕೆ ಕರೆತರಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಸದ್ಯ ಅಲ್ಲಿನ ಉದ್ವಿಗ್ನ ಕಠಿಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿ ಅವಲೋಕಿಸಿ ನಮ್ಮ ರಾಯಭಾರಿಯನ್ನು ವಾಪಸ್ ಭಾರತಕ್ಕೆ ಕರೆತರಲು ನಿರ್ಧರಿಸಲಾಗಿದೆ ಎಂದು ಬಗ್ಚಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯುಪಡೆಯ ಅಧಿಕ ತೂಕದ ಸಾಗಣೆ ವಿಮಾನ ಸಿ-17 ಕಳೆದ ರಾತ್ರಿ ಕೆಲವು ಸಿಬ್ಬಂದಿಯನ್ನು ಕರೆತಂದಿದ್ದು, ಎರಡನೇ ವಿಮಾನ ಇಂದು ಹಲವರನ್ನು ಹೊತ್ತು ತರುತ್ತಿದೆ.ಕಳೆದ ರಾತ್ರಿ ಅವರನ್ನು ಕಾಬೂಲ್ ನ ವಿಮಾನ ನಿಲ್ದಾಣದ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿತ್ತು. 

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಬೂಲ್ ನಿಂದ ರಾಯಭಾರಿ ಸಿಬ್ಬಂದಿಯನ್ನು ಸ್ಥಳಾಂತರಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಭಾನುವಾರ ಆಫ್ಘಾನಿಸ್ತಾನ ಸರ್ಕಾರ ಮುರಿದು ಬಿದ್ದು ಅಧ್ಯಕ್ಷ ಅಶ್ರಫ್ ಘಣಿ ದೇಶವನ್ನು ತೊರೆದಿದ್ದಾರೆ ಎಂದು ಈಗಾಗಲೇ ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್ ಉಗ್ರರು ಭಾನುವಾರ ಅಧ್ಯಕ್ಷರ ಅರಮನೆಯ ಹಿಡಿತ ಸಾಧಿಸಿದೆ. ಕಾಬೂಲ್ ನ್ನು ವಶಪಡಿಸಿಕೊಂಡು ಅಧ್ಯಕ್ಷರ ಅರಮನೆಯ ಹಿಡಿತ ಪಡೆದುಕೊಂಡ ನಂತರ ತಾಲಿಬಾನ್ ನಾಯಕರು ಮುಂದಿನ ತಮ್ಮ ಸರ್ಕಾರದ ಯೋಜನೆಗಳತ್ತ ದೋಹಾದಲ್ಲಿ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಲಿಬಾನ್ ಉಗ್ರರು ದೇಶದ ಹಿಡಿತ ಸಾಧಿಸುತ್ತಿದ್ದಂತೆ ಇತ್ತ ಅಫ್ಘನಿಯರು ತೀವ್ರ ಭಯದಿಂದ ದೇಶ ತೊರೆಯಲು ನೋಡುತ್ತಿದ್ದಾರೆ. ನಿನ್ನೆ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಬರಲು ರನ್ ವೇಯಲ್ಲಿ ಓಡಿಕೊಂಡು ಬಂದು ಹತ್ತಲು ನೋಡುತ್ತಿರುವ ದೃಶ್ಯ ಭೀಕರವಾಗಿತ್ತು. 

SCROLL FOR NEXT