ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಇದೇ ವೇಳೆ ಕೇಂದ್ರ ಸರ್ಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಹೆಚ್ಚುತ್ತಿರುವ ಕೋವಿಡ್ ಸಂಖ್ಯೆಗಳು ಆತಂಕಕಾರಿಯಾಗಿವೆ. ಮುಂದಿನ ಅಲೆಯಲ್ಲಿ ಹೆಚ್ಚಿನ ಪರಿಣಾಮಗಳನ್ನು ಇಲ್ಲವಾಗಿಸುವ ಕಾರಣದಿಂದ ಲಸಿಕೀಕರಣ ಶೀಘ್ರಗತಿಯಲ್ಲಿ ಸಾಗಬೇಕಿದೆ. ನಿಮ್ಮನ್ನು ನೀವೇ ಸುರಕ್ಷಿತವಾಗಿರಿಸಿಕೊಳ್ಳಿ. ಏಕೆಂದರೆ ಭಾರತ ಸರಕಾರ ಮಾರಾಟದಲ್ಲಿ ವ್ಯಸ್ತವಾಗಿದೆ ಎಂದು ಹೇಳಿದ್ದಾರೆ.
ಈ ಮೂಲಕ ಈ ವಾರದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಘೋಷಿಸಿದ ರಾಷ್ಟ್ರೀಯ ಸ್ವತ್ತುಗಳ ಮಾರಾಟದ ಕುರಿತು ಒಂದೇ ಟ್ವೀಟ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಮಾಹಿತಿ ನೀಡಿರುವ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 46,164 ಹೊಸ ಕೊರೋನಾ ವೈರಸ್ ಪ್ರಕರಣಗಳನ್ನು ದಾಖಲಾಗಿದ್ದು, ಶೇಕಡಾ 22 ರಷ್ಟು ಹೆಚ್ಚಾಗಿದಂತಾಗಿದೆ. ಇದರಂತೆ ಕಳೆದ ಒಂದೇ ದಿನ 607 ಮಂದಿ ಮೃತರಾಗಿದ್ದಾರೆ. ಸರ್ಕಾರದ ಪ್ರಕಾರ ದೇಶದ ಒಟ್ಟಾರೆ ಪ್ರಕರಣ ಇದೀಗ 3.25 ಕೋಟಿಯಷ್ಟಿದ್ದು, ಒಟ್ಟು ಸಾವುಗಳು 4.36 ಲಕ್ಷಗಳಷ್ಟಿದೆ.