ದೇಶ

ಜಲಿಯನ್ ವಾಲಾ ಬಾಗ್ ಸ್ಮಾರಕ ಪುನರುಜ್ಜೀವನ- ಸ್ಮಾರಕಕ್ಕೆ ಮಾಡಿದ ಅವಮಾನ: ರಾಹುಲ್ ಗಾಂಧಿ

Shilpa D

ನವದೆಹಲಿ: ಕೇಂದ್ರ ಸರ್ಕಾರ ‘ಜಲಿಯಾನ್‌ ವಾಲಾ ಬಾಗ್‌ ಸ್ಮಾರಕ‘ವನ್ನು ಪುನರುಜ್ಜೀವನಗೊಳಿಸಿರುವುದು ‘ಹುತಾತ್ಮರಿಗೆ ಮಾಡಿದ ಅವಮಾನ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು ‘ಹುತಾತ್ಮ‘ ಎಂಬುದರ ಅರ್ಥ ತಿಳಿಯದ ವ್ಯಕ್ತಿ ಮಾತ್ರ ಹೀಗೆ ಹುತಾತ್ಮರಿಗೆ ಅವಮಾನ ಮಾಡಲು ಸಾಧ್ಯ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ನಂತರ, ರಾಹುಲ್‌ ಗಾಂಧಿ ಸರ್ಕಾರದ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಸ್ಮಾರಕದ ನವೀಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವರದಿಯನ್ನು ಟ್ಯಾಗ್ ಮಾಡಿದ್ದಾರೆ. 

‘ನಾನು ಹುತಾತ್ಮರ ಮಗ. ಹುತಾತ್ಮರಿಗೆ ಮಾಡಿರುವ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂಥ ಕ್ರೌರ್ಯದ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ನವೀಕೃತ ಜಲಿಯಾನ್‌ ವಾಲಾಬಾಗ್‌ ಸ್ಮಾರಕವನ್ನು ಉದ್ಘಾಟಿಸಿ, ‘ಇತಿಹಾಸವನ್ನು ರಕ್ಷಿಸುವುದು ದೇಶದ ಕರ್ತವ್ಯ‘ ಎಂದು ಒತ್ತಿ ಹೇಳಿದ್ದರು. ಹಿಂದಿನ ಘಟನೆಗಳು ‘ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ. ಹಾಗೆಯೇ, ದೇಶವನ್ನು ಮುನ್ನಡೆಸಲು ನಿರ್ದೇಶನ ನೀಡುತ್ತವೆ‘ ಎಂದು ಹೇಳಿದ್ದರು. 

SCROLL FOR NEXT