ದೇಶ

ನವದೆಹಲಿ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭ

Nagaraja AB

ನವದೆಹಲಿ: ತಮಿಳುನಾಡಿನ ಕೂನೂರನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮದುಲಿಕಾ ರಾವತ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭಗೊಂಡಿದೆ. ಸೇನಾ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಸಾಗುತ್ತಿದೆ. 

ಅವರ ನಿವಾಸದಿಂದ ಆರಂಭವಾದ ಅಂತಿಮ ಯಾತ್ರೆ ದೆಹಲಿಯ ಕಂಟೊನ್ಮೆಂಟ್ ನಲ್ಲಿರುವ ಬ್ರಾರ್ ಸ್ಕ್ವೇರ್ ಸಮಾಧಿಯವರೆಗೂ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಲಿದೆ. ಪಾರ್ಥಿವ ಶರೀರ ಸಾಗುತ್ತಿರುವ ರಸ್ತೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇರುತ್ತಿರುವ ಜನರು, ಅಗಲಿದ ಸೇನಾದಂಡನಾಯಕನಿಗೆ ಪುಷ್ಪ ಗೌರವ ಸಲ್ಲಿಸುತ್ತಿದ್ದಾರೆ. 

ಅಪರಾಹ್ನ 3-30 ರಿಂದ ಸಂಬಂಧಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  4 ರಿಂದ 4-15ರವರೆಗೆ ಗಣ್ಯರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 4-15 ರಿಂದ 4-30ರವರೆಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತದೆ. 

 ಬಿಪಿನ್ ರಾವತ್  ಪಾರ್ಥಿವ ಶರೀರದ ಅಂತ್ಯಕ್ರಿಯೆ ವೇಳೆ  ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದ ಮಿಲಿಟರಿ ಕಮಾಂಡರ್ ಗಳು ಪಾಲ್ಗೊಳ್ಳಲಿದ್ದಾರೆ. ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ವೇಳೆ ಭದ್ರತೆಗಾಗಿ ಸುಮಾರು 800 ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. 

SCROLL FOR NEXT