ದೇಶ

ಲಖಿಂಪುರ ಹಿಂಸಾಚಾರ: ಅಜಯ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪ್ರಧಾನಿ ಮೋದಿ ವಿಫಲ- ರಾಹುಲ್ ಗಾಂಧಿ

Lingaraj Badiger

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಿರುದ್ಧ ಪ್ರಧಾನಿ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಮಾಧ್ಯಮವೂ ತನ್ನ ಕೆಲಸವನ್ನು ಮಾಡುತ್ತಿಲ್ಲ, ಪ್ರಧಾನ ಮಂತ್ರಿಯೂ ಮಾಡುತ್ತಿಲ್ಲ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

ನಾವು ಈ ವಿಷಯದ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ. ದೇಶದ ಜನರ ವಿರುದ್ಧದ ಸರ್ಕಾರದ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ನಾವು ಅವರನ್ನು ಬಿಡುವುದಿಲ್ಲ. ಮುಂದೊಂದು ದಿನ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ರಾಹುಲ್ ಗಾಂಧಿ ಆಜಯ್ ಮಿಶ್ರಾ ಅವರಿ​ಗೆ ಎಚ್ಚರಿಕೆ ನೀಡಿದರು.

ಸಚಿವರ ಪುತ್ರ ರೈತರನ್ನು ಕೊಂದಿದ್ದಾರೆ. ಎಸ್‌ಐಟಿ ವರದಿ ಇದನ್ನು ಪಿತೂರಿ ಎಂದು ಹೇಳಿದೆ. ಪ್ರಧಾನಿ ಇದರ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ. ನೀವು(ಪ್ರಧಾನಿ) ರೈತರ ಬಳಿ ಕ್ಷಮೆಯಾಚಿಸಿ, ಆದರೆ ಸಚಿವರನ್ನು ತೆಗೆದುಹಾಕಿ ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.

ಲಖಿಂಪುರ ಖೇರಿ ಹಿಂಸಾಚಾರ ಸಂಬಂಧ ಇಂದು ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ಸಂಸದರು ಸಂಸತ್ತಿನ ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ್‌ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.

ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆ ಪೂರ್ವನಿಯೋಜಿತ ಪಿತೂರಿ ಎಂದು ಎಸ್‌ಐಟಿ ವರದಿ ಹೇಳಿದಾಗಿನಿಂದ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಮಿಶ್ರಾ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. 
ರಾಹುಲ್ ಗಾಂಧಿ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು “ಅಪರಾಧಿ” ಎಂದು ಕರೆದಿದ್ದಾರೆ. ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

SCROLL FOR NEXT