ದೇಶ

ಕೇಂದ್ರ ಸಂಪುಟ ಪುನರ್ ರಚನೆ: ರಾಷ್ಟ್ರಪತಿ ಭವನದಲ್ಲಿ 43 ನೂತನ ಸಚಿವರಿಂದ ಪದಗ್ರಹಣ

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, 43 ನೂತನ ಸಚಿವರು ಪದಗ್ರಹಣ ಮಾಡಿದ್ದಾರೆ. 
 
ರಾಷ್ಟ್ರಪತಿ ಭವನದಲ್ಲಿ ಜು.7 ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಎ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ್ ಖೂಬಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಕಳೆದ ವರ್ಷ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದಕ್ಕೆ ಕಾರಣರಾಗಿದ್ದ ಸಂಸದ ಜ್ಯೋತಿರಾದಿತ್ಯ ಸಿಂಧಿಯಾಗೂ ಸಚಿವ ಸ್ಥಾನ ದೊರೆತಿದ್ದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಡಿ.ವಿ.ಸದಾನಂದ ಗೌಡ, ಡಾ. ಹರ್ಷವರ್ಧನ್, ರಾವು ಸಾಹೇಬ್ ದಾನ್ವೆ ಪಾಟೀಲ್,  ಬಾಬುಲ್ ಸುಪ್ರಿಯೋ, ಪ್ರತಾಪ್ ಸಾರಂಗಿ, ರಮೇಶ್ ಪೋಖ್ರಿಯಾಲ್, ದೇಬಾಶ್ರೀ ಚೌಧುರಿ, ಸಂತೋಷ್ ಗಂಗ್ವಾರ್, ಥಾವರ್ ಚಂದ್ ಗೆಹ್ಲೋಟ್, ಸಂಜಯ್ ಶಮರಾವ್ ಧೋತ್ರೆ ಮತ್ತು ರತ್ತನ್  ಲಾಲ್ ಕಟಾರಿಯಾ ಸೇರಿದಂತೆ 11 ಮಂದಿಯನ್ನು  ಸಂಪುಟದಿಂದ ಕೈಬಿಡಲಾಗಿದೆ. 

ಈ ಬಾರಿ ಹೆಚ್ಚಿನ ಸಂಖ್ಯೆಯ ಎಸ್ ಸಿ, ಎಸ್ ಟಿ ಪ್ರತಿನಿಧಿಸುವ ಸಂಸದರು ಸೇರಿದಂತೆ 43 ಹೊಸ ಸದಸ್ಯರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟ ಸೇರಿದ್ದಾರೆ 

ಸಂಪುಟ ಪುನರ್ ರಚನೆ ನಂತರ ಪರಿಶಿಷ್ಟ ಸಮುದಾಯದಿಂದ 12 ಸದಸ್ಯರು ಮತ್ತು ಪರಿಶಿಷ್ಟ ಪಂಗಡದಿಂದ 8 ಸದಸ್ಯರು ಸಂಪುಟ ಸೇರಲಿದ್ದಾರೆ. ಕ್ಯಾಬಿನೆಟ್ ವಿಸ್ತರಣೆಯ ನಂತರ, ಮೋದಿ ಸರ್ಕಾರ 27 ಒಬಿಸಿ ನಾಯಕರನ್ನು ಹೊಂದುವ ನಿರೀಕ್ಷೆಯಿದೆ. ಅದರಲ್ಲಿ ಐವರು ಕ್ಯಾಬಿನೆಟ್ ನಲ್ಲಿರುತ್ತಾರೆ. ಸಚಿವರ ಕಾರ್ಯಕ್ಷಮತೆಯನ್ನು ಆಧರಿಸಿ ಮುಂಬಡ್ತಿ, ಖೊಕ್ ನೀಡಲಾಗಿದೆ. 

SCROLL FOR NEXT