ದೇಶ

'ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ': ಕೇಂದ್ರದ ಹೇಳಿಕೆ ವಿರುದ್ಧ ದೆಹಲಿ ಆರೋಗ್ಯ ಸಚಿವ ತೀವ್ರ ಕಿಡಿ

Manjula VN

ನವದೆಹಲಿ: ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆ ವಿರುದ್ಧ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಕ್ಸಿಜನ್ ಕೊರತೆಯಿಂದಾಗಿ ದೆಹಲಿಯಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಷ್ಟೇ ಅಲ್ಲದೆ, ದೇಶದ ಇತರೆ ಭಾಗಗಳಲ್ಲೂ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಕೊರತೆ ಇಲ್ಲದೇ ಹೋಗಿದ್ದರೆ, ಆಸ್ಪತ್ರೆಗಳೇಕೆ ನ್ಯಾಯಾಲಯದ ಮೆಟ್ಟಿಲೇರುತ್ತವೆ ಎಂದು ಪ್ರಶ್ನಿಸಿದ್ದಾರೆ. 

ಆಕ್ಸಿಜನ್ ಕೊರತೆ ಇರುವ ಕುರಿತು ಆಸ್ಪತ್ರೆ ಹಾಗೂ ಮಾಧ್ಯಮದವರು ಪ್ರತೀನಿತ್ಯ ದನಿ ಎತ್ತುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಜೀವ ರಕ್ಷಕವಾಗಿರುವ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ಮಾಧ್ಯಮಗಳು ಹಲವಾರು ಸುದ್ದಿಗಳನ್ನು ಪ್ರಕಟಿಸುತ್ತಲೇ ಇವೆ. ಇಷ್ಟಾದರೂ, ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾವುದೇ ಸಾವುಗಳೂ ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. 

ನಿನ್ನೆಯಷ್ಟೇ ರಾಜ್ಯಸಭೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ದೇಶಾದ್ಯಂತ ಕೋವಿಡ್ 19 ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಾವು ಸಂಭವಿಸಿದ ಪ್ರಕರಣಗಳು ನಿರ್ದಿಷ್ಟವಾಗಿ ವರದಿಯಾಗಿಲ್ಲ. ಆದರೆ, 2ನೇ ಅಲೆ ಸಂದರ್ಭದಲ್ಲಿ ವೈದ್ಯಕೀಯ ಆಕ್ಸಿಜನ್‌ಗೆ ಹಿಂದೆಂದೂ ಕಾಣದ ರೀತಿಯಲ್ಲಿ ಬೇಡಿಕೆ ಉಂಟಾಗಿತ್ತು.

ಮೊದಲ ಅಲೆಯಲ್ಲಿ 9,095 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗಿದ್ದರೆ, ಎರಡನೆಯ ಅಲೆಯಲ್ಲಿ ಸುಮಾರು 9,000 ಮೆಟ್ರಿಕ್ ಟನ್ ಅಗತ್ಯಬಿದ್ದಿತ್ತು. ಇದರಿಂದ ರಾಜ್ಯಗಳ ನಡುವೆ ಸೂಕ್ತ ಪ್ರಮಾಣದಲ್ಲಿ ಲಸಿಕೆ ವಿತರಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕಾಗಿತ್ತು ಎಂದು ಹೇಳಿತ್ತು. 

2ನೇ ಅಲೆ ವೇಳೆ ಭಾರಿ ಸಂಖ್ಯೆಯಲ್ಲಿ ಕೋವಿಡ್ 19 ರೋಗಿಗಳು ರಸ್ತೆಗಳು ಮತ್ತು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆಯೇ ಎಂದು ರಾಜ್ಯಸಭೆ ಕಲಾಪದ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು, ಆರೋಗ್ಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ವಿಷಯ. ಒಟ್ಟು ಪ್ರಕರಣ ಹಾಗೂ ಸಾವುಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ಮರಣಗಳ ವರದಿಗಾಗಿ ಎಲ್ಲ ರಾಜ್ಯ ಹಾಗೂ ಯುಟಿಗಳಿಗೆ ವಿಸ್ತೃತ ಮಾರ್ಗಸೂಚಿಗಳನ್ನು ರವಾನಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ದೈನಂದಿನ ಅವಧಿಯಲ್ಲಿ ವರದಿ ಸಲ್ಲಿಸುತ್ತಿವೆ. ಆದರೆ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ದಿಷ್ಟವಾಗಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವಿನ ಬಗ್ಗೆ ವರದಿ ನೀಡಿಲ್ಲ ಎಂದು ಹೇಳಿದ್ದರು. 

SCROLL FOR NEXT