ದೇಶ

ವಿವಾದಿತ ಗಡಿ ಪ್ರದೇಶದಗಳಿಂದ ಪೊಲೀಸ್ ಸಿಬ್ಬಂದಿ ಹಿಂಪಡೆಯಲು ಅಸ್ಸಾಮ್, ನಾಗಾಲ್ಯಾಂಡ್ ನಿರ್ಧಾರ

Srinivas Rao BV

ಗುವಾಹಟಿ: ವಿವಾದಿತ ಗಡಿ ಪ್ರದೇಶಗಳಿಂದ ಭದ್ರತಾ ಪಡೆಗಳನ್ನು ಹಿಂಪಡೆಯುವುದಕ್ಕೆ ಅಸ್ಸಾಂ, ನಾಗಾಲ್ಯಾಂಡ್ ನಿರ್ಧರಿಸಿದೆ.

ಪ್ರಕ್ಷುಬ್ಧ ವಾತಾವರಣವನ್ನು ತಗ್ಗಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳೂ ಈ ನಿರ್ಧಾರಕ್ಕೆ ಬಂದಿವೆ. ಅಂತಾರಾಜ್ಯ ಗಡಿ ವಿವಾದ ಉಂಟಾಗಿದ್ದು, ವಿವಾದಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. 

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಈ ನಡೆಯನ್ನು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಉಭಯ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ನಡುವೆ ನಾಗಲ್ಯಾಂಡ್ ನ ದಿಮಾಪುರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವಿವಾದಿತ ಪ್ರದೇಶದಲ್ಲಿ ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು.

ವಿವಾದಿತ ಎರಡೂ ಪ್ರದೇಶಗಳು ಜೋರ್ಹಟ್ ಜಿಲ್ಲೆಯಲ್ಲಿನ ಡೆಸೊಯ್ ಕಣಿವೆ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದವೆಂದು ಅಸ್ಸಾಂ ಹೇಳುತ್ತಿದೆ. ಆದರೆ ನಾಗಾಲ್ಯಾಂಡ್ ಈ ಎರಡೂ ಪ್ರದೇಶಗಳು ನಾಗಾಲ್ಯಾಂಡ್  ನ ಮೊಕೊಕ್ಚುಂಗ್ ಜಿಲ್ಲೆಯ ತ್ಸುರಾಂಗ್‌ಕಾಂಗ್ ಕಣಿವೆಯ ಭಾಗವೆಂದು ಪ್ರತಿಪಾದಿಸುತ್ತಿದೆ.

ಘರ್ಷಣೆ ತಪ್ಪಿಸಲು, ಶಾಂತಿ ಕಾಪಾಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿರ್ಧಾರವನ್ನು ಮುಖ್ಯಕಾರ್ಯದರ್ಶಿಗಳ ನಡುವಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿಗಳನ್ನು ವಿವಾದಿತ ಪ್ರದೇಶದಿಂದ ತಕ್ಷಣವೇ ಉಭಯ ಪಕ್ಷಗಳೂ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರ್ಧರಿಸಿದ್ದು, 24 ಗಂಟೆಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ.

ಒಪ್ಪಂದದ ಪ್ರಕಾರ ನಾಗಾಲ್ಯಾಂಡ್ ಹಾಗೂ ಅಸ್ಸಾಂ ಈ ಪ್ರದೇಶದ ಮೇಲೆ ಯುಎವಿ ಮೂಲಕ ಕಣ್ಗಾವಲು ಇರಲಿದೆ. ಶಾಂತಿ ಸ್ಥಾಪನೆಗೆ ಸಹರಿಸಿದ ನಾಗಾಲ್ಯಾಂಡ್ ನ ಸಿಎಂ ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಧನ್ಯವಾದ ತಿಳಿಸಿದ್ದಾರೆ.

ಅಸ್ಸಾಂ ಗಡಿಗಳಲ್ಲಿ ಶಾಂತಿ ಪಾಲನೆಗೆ ಬದ್ಧವಾಗಿದೆ ಹಾಗೂ ಈಶಾನ್ಯದ ಆರ್ಥಿಕ ಸಾಮಾಜಿಕ ಸಮೃದ್ಧಿ ಶ್ರಮಿಸುತ್ತದೆ ಎಂದು ಹಿಮಂತ ಬಿಸ್ವ ಶರ್ಮ ಟ್ವೀಟ್ ಮಾಡಿದ್ದಾರೆ. 

SCROLL FOR NEXT